ಸಿದ್ದಾಪುರ: ‘ಕೆಲವು ವರ್ಷಗಳಿಂದ ಹಿಂದಿನಂತೆ ತಮ್ಮ ಭಾಗದ ಹಲವು ಮನೆಗಳ ಬಾವಿಗಳಲ್ಲಿ ಶುಕ್ರವಾರ ಪುನಃ ಕಲುಷಿತ ನೀರು ಸೇರಿದ್ದು, ಬಾವಿಗಳ ನೀರು ಉಪಯೋಗಕ್ಕೆ ಬಾರದಂತಾಗಿದೆ’ ಎಂದು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಹೊನ್ನೇಗುಂಡಿ ನಿವಾಸಿಗಳು ತಿಳಿಸಿದ್ದಾರೆ.
‘ಬಾಲಿಕೊಪ್ಪ ಭಾಗದಿಂದ ಹೊನ್ನೇ ಗುಂಡಿಯವರೆಗೆ ನಿರ್ಮಿಸುತ್ತಿರುವ ಚರಂಡಿ ಈ ಸಮಸ್ಯೆಗೆ ಕಾರಣವಾಗಿದ್ದು, ಚರಂಡಿಯ ತಳವನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಕಲುಷಿತ ನೀರು ತಮ್ಮ ಬಾವಿಯ ನೀರಿಗೆ ಸೇರುತ್ತಿದೆ.
ಇದರಿಂದ ಈ ಬಾವಿಗಳ ನೀರು ಬಳಕೆಗೆ ಬಾರದಂತಾಗುತ್ತಿದೆ’ ಎಂದು ಸ್ಥಳೀಯರಾದ ಎಲ್.ಪಿ.ಹೆಗಡೆ, ವಿ.ವಿ.ಹೆಗಡೆ ಹಾಗೂ ಅಶೋಕ ಭಟ್ಟ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.