ಮಡಿಕೇರಿ: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಚ್ಚುವರಿ ಆರು ತಿಂಗಳು ಕಾಲಾವಕಾಶ ಪಡೆದ ಬಳಿಕ ಎರಡನೇ ಹಂತದ ತನಿಖೆಯನ್ನು ಸಿಬಿಐ ತಂಡ ಆರಂಭಿಸಿದೆ.
ತನಿಖಾ ತಂಡದ ಮುಖ್ಯಸ್ಥ ತಲೈಮಣಿ ನೇತೃತ್ವದಲ್ಲಿ ಶುಕ್ರವಾರ ನಗರಕ್ಕೆ ಬಂದಿದ್ದ ಅಧಿಕಾರಿಗಳು, ಮೃತ ಗಣಪತಿ ಸಹೋದರ ಎಂ.ಕೆ.ಮಾಚಯ್ಯ ಅವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ.
ಸಿಐಡಿ ವರದಿ ಹಾಗೂ ನ್ಯಾಯಾಂಗ ವಿಚಾರಣೆ ಆಯೋಗದ ಬಳಿಯಿರುವ ದಾಖಲೆಗಳನ್ನು ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಲಯದ ಮೂಲಕವೇ ಅಧಿಕೃತವಾಗಿ ಪಡೆದುಕೊಳ್ಳಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ.
ಈಗಾಗಲೇ ಮೂರು ತಿಂಗಳು ತನಿಖೆ ಪೂರ್ಣಗೊಳಿಸಿರುವ ಸಿಬಿಐಗೆ ಇದುವರೆಗೂ ದಾಖಲೆಗಳ ಹಸ್ತಾಂತರವಾಗಿಲ್ಲ. ತನಿಖೆಗೆ ಸುಪ್ರೀಂ ಕೋರ್ಟ್ ಹೆಚ್ಚುವರಿ ಸಮಯ ನೀಡಿರುವ ಬೆನ್ನಲೆ ಅಗತ್ಯ ದಾಖಲೆ ಪಡೆಯಲು ತನಿಖಾ ತಂಡ ಮುಂದಾಗಿದೆ.