ಕಲಬುರ್ಗಿ: ನಗರ ಹೊರವಲಯದ ನಂದೂರು ಬಳಿ ಇರುವ ಮಾನಸ ದೇವಿ ಬಿಸ್ಕತ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಘೋಷಣೆ ಕೂಗಿದರು.
‘ಕಂಪನಿ ಆರಂಭವಾಗಿ 3 ವರ್ಷಗಳಾಗಿವೆ. ಆದರೆ ಕನ್ನಡಿಗರಿಗೆ ಶೇ 30ರಷ್ಟು ಮಾತ್ರ ಉದ್ಯೋಗ ನೀಡಲಾಗಿದ್ದು, ಅನ್ಯ ರಾಜ್ಯದವರಿಗೆ ಹೆಚ್ಚಿನ ಉದ್ಯೋಗ ನೀಡಲಾಗಿದೆ. ಸ್ಥಳೀಯರಿಂದ 12 ಗಂಟೆ ಕೆಲಸ ಮಾಡಿಸಿಕೊಂಡು ತಿಂಗಳಿಗೆ ₹5 ಸಾವಿರ ಸಂಬಳ ನೀಡುತ್ತಿದ್ದಾರೆ.
ಆದರೆ ಅನ್ಯ ರಾಜ್ಯದವರಿಗೆ ₹9 ಸಾವಿರ ಸಂಬಳ ಕೊಡುತ್ತಿದ್ದಾರೆ. ಆದ್ದರಿಂದ ಕಂಪನಿ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಸೇನೆಯ ಪದಾಧಿಕಾರಿಗಳಾದ ಅಮೃತ ಪಾಟೀಲ ಸಿರನೂರ, ರವಿ ಒಂಟಿ, ಸಿದ್ದು ಕಂದಗಲ್, ಭರತ ಭೂಷಣ, ಶ್ರೀನಿವಾಸ ಶೇಷಗಿರಿ, ವಸಂತ, ಆಕಾಶ ಇದ್ದರು.