ಕಾರಟಗಿ: ನದಿಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರೀನ್ ವ್ಯಾಲಿ ಪ್ರೌಢಶಾಲೆ ವತಿಯಿಂದ ಶನಿವಾರ ಜಾಗೃತಿ ಜಾಥಾ ನಡೆಯಿತು.
ಜಾಥಾಗೆ ಚಾಲನೆ ನೀಡಿದ ಆಡಳಿತ ಮಂಡಳಿ ಮುಖ್ಯಸ್ಥ ಕೆ. ವೆಂಕಟರಾವ್ ಮಾತನಾಡಿ, ನದಿಗಳು ಸೃಷ್ಟಿ ನೀಡಿರುವ ಬಹುದೊಡ್ಡ ಕೊಡುಗೆ. ನದಿಗಳ ಸಂರಕ್ಷಣೆ ಮಾಡುವುದರ ಜತೆಗೆ ನದಿಗಳ ಜೋಡಣೆ ಮಹತ್ವಾಕಾಂಕ್ಷಿ ಯೋಜನೆಗೆ ಒತ್ತು ನೀಡಬೇಕಿದೆ ಎಂದರು.
ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳನ್ನೊಳಗೊಂಡ ಜಾಥಾ ಶಾಲಾ ಆವರಣದಿಂದ ಆರಂಭಗೊಂಡು ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ಸಾಲೋಣಿ, ವಿವಿಧ ಓಣಿ, ಹಳೆ ಬಸ್ ನಿಲ್ದಾಣ, ದಲಾಲಿ ಬಜಾರ್, ಕರೆಪ್ಪತಾತ ದೇವಾಲಯ, ಪುರಸಭೆ ಕಚೇರಿ ಮಾರ್ಗವಾಗಿ ಶಾಲೆ ತಲುಪಿತು.
ಜಾಥಾದಲ್ಲಿ ವಿದ್ಯಾರ್ಥಿಗಳು ನದಿ, ಜಲ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಘೋಷಣೆ ಹಾಕಿ ಗಮನ ಸೆಳೆದರು. ಆಡಳಿತ ಮಂಡಳಿ ನಿರ್ದೇಶಕ ಶಾಂತಿಚಂದ್, ಮುಖ್ಯಗುರು ಜಿ.ಎ. ಆದಿತ್ಯ ಶಂಕರ, ವೀರೇಶ್, ಶಿಕ್ಷಕರು ಜಾಥಾದಲ್ಲಿ ಉಪಸ್ಥಿತರಿದ್ದರು.