ರಾಮೇಶ್ವರ: ಅಕ್ರಮವಾಗಿ ತನ್ನ ಜಲಗಡಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ತಮಿಳುನಾಡಿನ ಸುಮಾರು 4 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಹಿಮ್ಮೆಟ್ಟಿಸಿದ್ದು, 100 ದೋಣಿಗಳಲ್ಲಿದ್ದ ಬಲೆಗಳನ್ನು ವಶಪಡಿಸಿಕೊಂಡಿದೆ.
‘ಶನಿವಾರ 800 ದೋಣಿಗಳಲ್ಲಿ ಕಟ್ಚತ್ತೀವು ಪ್ರದೇಶದಕ್ಕೆ ತೆರಳಿ ಮೀನು ಹಿಡಿಯುತ್ತಿದ್ದ ವೇಳೆ ಬಂದ ಶ್ರೀಲಂಕಾ ನೌಕಾಪಡೆ ರಾಮೇಶ್ವರ ಹಾಗೂ ಮಂಡಪಮ್ ಮೂಲದ ಮೀನುಗಾರರಿಗೆ ವಾಪಸ್ ತೆರಳುವಂತೆ ಸೂಚಿಸಿತು’ ಎಂದು ರಾಮೇಶ್ವರ ಮೀನುಗಾರರ ಸಂಘದ ಅಧ್ಯಕ್ಷ ಪಿ. ಸೇಸುರಾಜ ಹೇಳಿದ್ದಾರೆ.
ತಮ್ಮನ್ನು ಹಿಮ್ಮಟ್ಟಿಸುವ ವೇಳೆ ಸುಮಾರು 100 ದೋಣಿಗಳಲ್ಲಿದ್ದ ಬಲೆಗಳನ್ನೂ ವಶಪಡಿಸಿಕೊಳ್ಳಲಾಯಿತು ಎಂದು ದೂರಿದ ಅವರು, ಕೇಂದ್ರ ಸರ್ಕಾರ ಈ ಕುರಿತು ತನಿಖೆ ನಡೆಸಿ ಮೀನುಗಾರರ ಸಮಸ್ಯೆ ಬಗೆಹರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಎಲ್ಲ ಮೀನುಗಾರರು ಭಾನುವಾರ ಬೆಳಿಗ್ಗೆ ತೀರ ತಲುಪಿದ್ದಾರೆ.
ಈ ತಿಂಗಳಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಜನವರಿ 4 ರಂದು ಇದೇ ಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ ತಂಗಚಿಮದಮ್ನ 13 ಮೀನುಗಾರರನ್ನು ಶ್ರೀಲಂಕಾ ಅಧಿಕಾರಿಗಳು ಬಂಧಿಸಿದ್ದರು.
ಈ ಸಂಬಂಧ ರಾಮೇಶ್ವರಂನಲ್ಲಿ ಮೀನುಗಾರರನ್ನು ಭೇಟಿ ಮಾಡಿದ್ದ ತಮಿಳುನಾಡು ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ, ‘ಬಂಧನ ಸೇರಿದಂತೆ ಮೀನುಗಾರರ ಕುಂದುಕೊರತೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದ್ದರು.