ಬೆಂಗಳೂರು: ‘ಬಿಜೆಪಿಯ ಶೋಭಾ ಕರಂದ್ಲಾಜೆ ನಿಮ್ಹಾನ್ಸ್ನಿಂದಲೇ ಬಂದಿದ್ದು, ಇದೇ ರೀತಿ ಮಾತನಾಡುತ್ತಿದ್ದರೆ ಅವರನ್ನು ಮತ್ತೆ ಅಲ್ಲಿಗೇ ಸೇರಿಸಬೇಕಾಗುತ್ತದೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
‘ಸಚಿವ ರೆಡ್ಡಿ ಅವರಿಗೆ ತಲೆ ಕೆಟ್ಟಿದೆ. ಅವರಿಗೆ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಕೊಡಿಸಬೇಕು’ ಎಂದು ಇತ್ತೀಚೆಗೆ ಶೋಭಾ ಹೇಳಿದ್ದರು.
ಇದಕ್ಕೆ ತಿರುಗೇಟು ಕೊಟ್ಟ ರೆಡ್ಡಿ, ‘ನಮ್ಮ ಮನೆಯ ಎದುರೇ ನಿಮ್ಹಾನ್ಸ್ ಇದೆ. ಶೋಭಾ ಅಲ್ಲಿಂದಲೇ ಬಂದಿದ್ದಾರೆ’ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಇರುವವರು ಘನತೆಯಿಂದ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ರಾಜಕೀಯದಲ್ಲಿ ಇರಲು ಅವರೆಲ್ಲ ನಾಲಾಯಕ್ ಎಂದು ಹರಿಹಾಯ್ದರು.
ಎಸ್ಡಿಪಿಐ ಜತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ಪುತ್ತೂರು ತಾಲ್ಲೂಕಿನ(ಶೋಭಾ ಹುಟ್ಟಿದ ತಾಲ್ಲೂಕು) ಸವಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್ಡಿಪಿಐನ ಚೌರಾಬಿಗೆ ಬಿಜೆಪಿ ಬೆಂಬಲ ನೀಡಿದ್ದರಿಂದ 10 ಮತಗಳಿಂದ ಅವರು ಗೆದ್ದಿದ್ದರು. ಇದಕ್ಕೆ ಇಲ್ಲಿದೆ ಸಾಕ್ಷ್ಯ ಎಂದು ಹೇಳಿದ ರೆಡ್ಡಿ, ಪತ್ರಿಕೆಯೊಂದನ್ನು ಪ್ರದರ್ಶಿಸಿದರು.
‘ಗೋಹತ್ಯೆ ನಿಷೇಧಿಸಲಿ’ ಎಂಬ ಯೋಗಿ ಆದಿತ್ಯನಾಥ ಆಗ್ರಹಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಕೇವಲ ಗೋಹತ್ಯೆ ನಿಷೇಧಿಸುವುದು ಏಕೆ. 14 ಲಕ್ಷದಷ್ಟಿರುವ ಪ್ರಾಣಿ, ಪಕ್ಷಿಗಳ ಹತ್ಯೆಯೂ ನಡೆಯುವುದು ಬೇಡ. ಪ್ರಾಣಿ ಹತ್ಯೆಯನ್ನು ಅವರು ನಿಲ್ಲಿಸಲಿ ಎಂದು ಹೇಳಿದರು.