ಬನಶಂಕರಿ (ಬಾದಾಮಿ): ಬನಶಂಕರಿದೇವಿ ಜಾತ್ರೆಯಲ್ಲಿ ವೈವಿಧ್ಯಮಯ ಕಲಾಕುಸುರಿಯ ಅಲಂಕಾರ ಹೊಂದಿರುವ ಹೊಳೆ ಆಲೂರ, ಚೊಳಚಗುಡ್ಡ ಮತ್ತು ಕೆರೂರ ಗ್ರಾಮಗಳ ಬಾಗಿಲು ಚೌಕಟ್ಟುಗಳ ಅಂಗಡಿಗಳು ಎಲ್ಲರ ಗಮನ ಸೆಳೆದವು.
‘ನೂರಾರು ಕಲಾವಿದರು ವರ್ಷವಿಡಿ ಬಾಗಿಲು ಚೌಕಟ್ಟು ಮತ್ತು ಪಡಕುಗಳನ್ನು ರೂಪಿಸುತ್ತಾರೆ. ಈ ಹಿಂದೆ ಕೇವಲ ಬಡಿಗೇರ ಜನಾಂಗ ಮಾತ್ರ ಕಾಷ್ಠಕಲೆಯಲ್ಲಿ ಪರಿಣಿತರಾಗಿದ್ದರು. ಎಲ್ಲ ಜನಾಂಗದವರೂ ಈ ಕಲೆಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಕಲಾವಿದ ಬಸೀರ್ಅಹ್ಮದ್ ಹೇಳಿದರು.
‘ಹೊಳೆ ಆಲೂರ, ಹೊಳೆ ಮಣ್ಣೂರ, ಮುಮರಡ್ಡಿಕೊಪ್ಪ, ಹೆಬ್ಬಳ್ಳಿ ಜಕನೂರ, ಗಾಡಗೊಳ್ಳಿ ಗ್ರಾಮಗಳ ಕಲಾವಿದರು ವರ್ಷವಿಡೀ ತಯಾರಿಸಿದ ಬಾಗಿಲು ಚೌಕಟ್ಟುಗಳನ್ನು ಮಾರಾಟ ಮಾಡಲು ಜಾತ್ರೆಗೆ ಬರುತ್ತೇವೆ. ಒಂದೊಂದು ಅಂಗಡಿಯಿಂದ ನೂರಕ್ಕೂ ಹೆಚ್ಚು ಬಾಗಿಲು ಚೌಕಟ್ಟುಗಳು ಮಾರಾಟವಾಗುತ್ತವೆ’ ಎಂದರು.
ಮೈಸೂರ ಸಾಗವಾನಿಯಲ್ಲಿ ತಯಾರಿಸಿದ ಬಾಗಿಲು ಚೌಕಟ್ಟುಗಳ ಬೇಡಿಕೆ ಅಧಿಕವಾಗಿದೆ. ಆರು ಅಡಿ ಎತ್ತರ ಮೂರುವರೆ ಅಡಿ ಅಗಲದ ಮೈಸೂರ ಸಾಗವಾನಿ ಬಾಗಿಲು ₹10ರಿಂದ ₹30 ಸಾವಿರದವರೆಗೆ ಮಾರಾಟವಾದರೆ, ಶುದ್ಧ ಸಾಗವಾನಿ ₹15ರಿಂದ ₹45 ಸಾವಿರದ ವರೆಗೆ ಮಾರಾಟವಾಗುತ್ತಿವೆ ಎಂದು ವ್ಯಾಪಾರಸ್ಥರು ತಿಳಿಸಿದರು.