ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

166 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ

Last Updated 9 ಜನವರಿ 2018, 7:05 IST
ಅಕ್ಷರ ಗಾತ್ರ

ಚಾಮರಾಜನಗರ: ‘ತಾಲ್ಲೂಕಿನ 166 ಗ್ರಾಮಗಳ 232 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಬಹು ಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಜ. 10ರಂದು ₹406 ಕೋಟಿ ಅಂದಾಜು ವೆಚ್ಚದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ’ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲ್ಲೂಕಿಗೆ ಸಂಬಂಧಿಸಿದಂತೆ ಒಟ್ಟು 111 ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದು, 10,808 ಫಲಾನುಭವಿ ಗಳಿಗೆ ₹29.47 ಕೋಟಿ ವೆಚ್ಚದ ವಿವಿಧ ಸವಲತ್ತುಗಳನ್ನು ವಿತರಿಸಲಿದ್ದಾರೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ನಗರ ಮೂಲಸೌಕರ್ಯ ಅಭಿ ವೃದ್ಧಿ ಮತ್ತು ಹಣಕಾಸು ನಿಗಮ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾವೇರಿ ನೀರಾವರಿ ನಿಗಮ, ಸಾರ್ವಜನಿಕ ಶಿಕ್ಷಣ ಇಲಾಖೆ ಮುಂತಾದ ಇಲಾಖೆ ಹಾಗೂ ನಿಗಮಗಳ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಶಾಸಕರು ಮತ್ತು ಸಂಸದರ ಅನುದಾನದಲ್ಲಿ ನಿರ್ಮಿಸಲಾಗಿರುವ 5 ಅಂಬೇಡ್ಕರ್‌ ಭವನಗಳು, 2 ನಾಯಕ ಜನಾಂಗದ ಭವನಗಳು, 2 ಕನಕ ಸಮುದಾಯದ ಭವನಗಳು ಮತ್ತು ಸಿದ್ದಮಲ್ಲೇಶ್ವರ ಪಟ್ಟದ ಮಠದ ಸಮುದಾಯ ಭವನಗಳನ್ನು ಉದ್ಘಾಟಿಸಲಿದ್ದಾರೆ ಎಂದರು. ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ಸಮಾರಂಭ ಆರಂಭವಾ ಗಲಿದೆ ಎಂದು ತಿಳಿಸಿದರು.

ಮಾಹಿತಿ ನೀಡುತ್ತಿಲ್ಲ: ಜಿಲ್ಲಾ ಕೇಂದ್ರದಲ್ಲಿ ನಡೆಯುವ ಉಸ್ತುವಾರಿ ಸಚಿವರ ಸಭೆಗಳಿಗೆ ತಮಗೆ ಆಹ್ವಾನ ಬರುತ್ತಿಲ್ಲ ಎಂದು ಪುಟ್ಟರಂಗಶೆಟ್ಟಿ ಅಸಮಾಧಾನ ಹೊರಹಾಕಿದರು. ಮಹದೇವಪ್ರಸಾದ್‌ ಅವರು ಇದ್ದಾಗ ಕ್ಷೇತ್ರದಲ್ಲಿ ಇದ್ದರೆ ಸಭೆಗೆ ಬರುವಂತೆ ಸ್ವತಃ ಕರೆ ಮಾಡಿ ಆಹ್ವಾನಿಸುತ್ತಿದ್ದರು. ಆದರೆ, ಈಗ ಸಚಿವರ ಆಪ್ತ ಸಹಾಯಕರು ತಮಗೆ ಮಾಹಿತಿಯನ್ನೇ ನೀಡುತ್ತಿಲ್ಲ. ಅಧಿಕಾರಿಗಳೂ ತಿಳಿಸುತ್ತಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಸಂಬಂಧ ಸಚಿವೆ ಎಂ.ಸಿ. ಮೋಹನಕುಮಾರಿ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಸಕ ರಾದ ಎಸ್. ಜಯಣ್ಣ ಮತ್ತು ಆರ್. ನರೇಂದ್ರ ಭಾಗವಹಿಸಿದ್ದರು. ಆದರೆ, ತಮಗೆ ವಿಚಾರವೇ ತಿಳಿದಿರಲಿಲ್ಲ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು. ನಗರಸಭೆ ಸದಸ್ಯ ನಂಜುಂಡ ಸ್ವಾಮಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಅಜ್ಗರ್ ಮುನ್ನಾ, ಗುರುಸ್ವಾಮಿ ಇದ್ದರು.

ಎಆರ್‌ಕೆ ಬಂದರೆ ಸ್ವಾಗತ’

ಮಾಜಿ ಶಾಸಕ, ಬಿಜೆಪಿ ಮುಖಂಡ ಎ.ಆರ್. ಕೃಷ್ಣಮೂರ್ತಿ ಕಾಂಗ್ರೆಸ್‌ ಸೇರುವುದಾದರೆ ಮುಕ್ತವಾಗಿ ಸ್ವಾಗತಿಸುವುದಾಗಿ ಪುಟ್ಟರಂಗಶೆಟ್ಟಿ ತಿಳಿಸಿದರು. ಎಆರ್‌ಕೆ ಪಕ್ಷ ಸೇರ್ಪಡೆಗೆ ಕೊಳ್ಳೇಗಾಲದಲ್ಲಿ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕೆ ಸೇರುವ ಯಾರನ್ನೇ ಆದರೂ ವಿರೋಧಿಸುವುದು ಸರಿಯಲ್ಲ ಎಂದರು.

‘ನಮ್ಮದು ವಿಶಾಲ ಹೃದಯಿಗಳಿರುವ ಪಕ್ಷ. ಯಾರನ್ನೂ ಬೇಡ ಎನ್ನುವುದಿಲ್ಲ. ಬೇಡ ಎಂದು ವಿರೋಧಿಸುವವರಿಗೆ ನೈತಿಕತೆಯೇ ಇಲ್ಲ. ಪಕಕ್ಕೆ ಬರುವವರನ್ನು ಸೇರಿಸಿಕೊಳ್ಳುವುದು ನಮ್ಮ ಧರ್ಮ’ ಎಂದು ಹೇಳಿದರು.

‘ಎಆರ್‌ಕೆ ಉತ್ತಮ ನಾಯಕ. ಅವರು ಬಂದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಬಂಧ ನನ್ನ ಅಭಿಪ್ರಾಯ ಕೇಳಿದ್ದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ್ದೆ’ ಎಂದು ತಿಳಿಸಿದರು.

‘ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ. ಹೈಕಮಾಂಡ್‌ ಸೂಚನೆಗಳನ್ನು ಪಾಲಿಸುತ್ತೇನೆ. ಕಾಂಗ್ರೆಸ್‌ಗೆ ಅನ್ಯಾಯ ಮಾಡುವುದು ಹೆತ್ತತಾಯಿಗೆ ಅನ್ಯಾಯ ಮಾಡಿದಂತೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT