ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಸ್ಸಿ ನೃತ್ಯಕ್ಕೆ ಮರುಳಾದ ಪ್ರೇಕ್ಷಕರು

Last Updated 9 ಜನವರಿ 2018, 8:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಪುಲಿಗೆರೆ ಉತ್ಸವದಲ್ಲಿ ಮೈಸೂರಿನ ಸಿಂಧೂ ಕಿರಣ ಅವರ ತಂಡ ಪ್ರದರ್ಶಿಸಿದ ಒಡಿಸ್ಸಿ ನೃತ್ಯಕ್ಕೆ ಸೇರಿದ್ದ ಸಾವಿರಾರು ಕಲಾರಸಿಕರು ಮರುಳಾದರು.

ಪ್ರಥಮದಲ್ಲಿ ಒಡಿಸ್ಸಿ ಶೈಲಿಯಂತಹ ಮಂಗಳಾಚರಣದಿಂದ ನೃತ್ಯ ಪ್ರಾರಂಭಿಸಿ ಎಲ್ಲ ದೇವತೆಗಳನ್ನು ಸ್ಮರಿಸುವ ಅದರಲ್ಲೂ ವಿಶೇಷವಾಗಿ ‘ಮಾಣಿಕ್ಯ ವೀಣಾ ಮುಫಲಾಯಂತಿ’ ಎನ್ನುವ ಹಾಡಿಗೆ ಕಲಾವಿದರು ಸೊಗಸಾಗಿ ಹೆಜ್ಜೆ ಹಾಕಿದರು. ತಂಡದ ಓಜಸ್ಸ ಬಳ್ಳೂರ ಅವರ ಅಭಿನಯದಲ್ಲಿ ಆನಂದ ತಾಂಡ ಶಿವಸ್ತ್ರೋತ್ರ ಸುಂದರವಾಗಿ ಮೂಡಿ ಬಂದಿತು.

ಒಜಸ್ಸ ಮತ್ತು ಶುಭಾ ಅವರು ಚಂದ್ರಾವರಣಂ ರಾಗದಲ್ಲಿ ನೃತ್ಯದ ವಿವಿಧ ಭಂಗಿಗಳನ್ನು ಅನಾವರಣಗೊಳಿಸಿದರು. ನಂತರ ತಂಡದ ನಿರ್ದೇಶಕಿ ಸಿಂಧೂ ಕಿರಣ ಅವರ ಮಹಾಕಾಳಿ ಪೂಜೆಯ ಅದ್ಭುತ ಪ್ರದರ್ಶನ ಎಲ್ಲರನ್ನು ಬೆರಗುಗೊಳಿಸಿತು. ನಂತರ ಮೋಕ್ಷಂ ಎನ್ನುವ ಅಂತಿಮಘಟ್ಟದಲ್ಲಿ ಒಜಸ್ಸ, ಸಿಂಧೂಕಿರಣ, ಶರ್ಮಿಷ್ಠಾಜನಾ, ಶುಭಾ ಅವರ ಒಡಿಸ್ಸಿ ನೃತ್ಯ ಪ್ರದರ್ಶನ ಅದ್ಭುತವಾಗಿ ಮೂಡಿ ಬಂದಿತು.

ನೃತ್ಯಾಂಗನ ತಂಡ: ಸ್ಥಳೀಯ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಇನ್ಫೋಸಿಸ್ ಪುಲಿಗೆರೆ ಉತ್ಸವದ ಮೂರನೆ ದಿನವಾದ ಭಾನುವಾರ ಮಂಗಳೂರಿನ ನೃತ್ಯಾಂಗನ ತಂಡದವರ ಪ್ರದರ್ಶಿಸಿದ ನೃತ್ಯಾರ್ಪಣಂ ಭರತನಾಟ್ಯ ಗಂಧರ್ವ ಲೋಕವನ್ನು ಸೃಷ್ಟಿಸಿತು.

ವಿ.ರಾಧಿಕಾ ಶೆಟ್ಟಿ ಅವರ ನಿರ್ದೇಶನದಲ್ಲಿ ಕೇವಲ ನಾಲ್ಕು ಜನರ ತಂಡ ಅದ್ಭುತವಾಗಿ ನೃತ್ಯ ಮಾಡುವುದರ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿ ಲಕ್ಷ್ಮೇಶ್ವರ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆ ನಿಂತರು.

ಆರಂಭದಿಂದಲೆ ಉತ್ತಮವಾಗಿ ನಾಟ್ಯ ಪ್ರದರ್ಶಿಸಿದ ಕಲಾವಿದರು ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು. ಮೊದಲು ಪುಷ್ಪಾಂಜಲಿ ರಾಗ ರಸಿಕಪಿಯ ತ್ರಿಪುಟ ತಾಳದಲ್ಲಿ ನೃತ್ಯ ಆರಂಭಿಸಿದರು. ನಂತರ ನೃತ್ಯದ ಅಧಿದೇವತೆ ನಟರಾಜನ ವಸ್ತ್ರಾಭರಣ ಅಲಂಕಾರವನ್ನು ವರ್ಣಿಸುವ ಶ್ಲೋಕ, ನಾರಾಯಣನ ಹತ್ತು ಅವತಾರಗಳಾದ ಮತ್ಯ್ಸ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ ಅವತಾರಗಳನ್ನು ಪ್ರದರ್ಶಿಸಿದರು.

ಕೊನೆಯಲ್ಲಿ ಮಂಗಳಂನೊಂದಿಗೆ ನೃತ್ಯಕ್ಕೆ ತೆರೆ ಬಿದ್ದಿತು. ತಂಡದ ಮುಖ್ಯಸ್ಥೆ ವಿ.ರಾಧಿಕಾ ಶೆಟ್ಟಿ, ದೀಪಕಕುಮಾರ, ಮಂಜುಳಾ ಸುಬ್ರಮಣ್ಯ, ಮಾನಸಾ ರೈ ನೃತ್ಯದಲ್ಲಿ ಭಾಗವಹಿಸಿದ್ದರು.

ಗಮನ ಸೆಳೆದ ಗಾಯತ್ರಿ ಕುಲಕರ್ಣಿ ಗಾಯನ: ಸ್ಥಳೀಯ ಸೋಮೇಶ್ವರ ದೇವಸ್ಥಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಇನ್ಫೋಸಿಸ್ ಪುಲಿಗೆರೆ ಉತ್ಸವದಲ್ಲಿ ಸೋಮವಾರ ಸ್ಥಳೀಯ ಕಲಾವಿದೆ ಗಾಯತ್ರಿ ಕುಲಕರ್ಣಿ ಸಾದರ ಪಡಿಸಿದ ಹಿಂದೂಸ್ತಾನಿ ಮತ್ತು ಸುಗಮ ಸಂಗೀತ ಗಮನ ಸೆಳೆಯಿತು.

ಎಂದಿನಂತೆ ಬೆಳಿಗ್ಗೆ ಉದಯರಾಗದಲ್ಲಿ ಗಾಯತ್ರಿ ಕೆ. ಕುಲಕರ್ಣಿ ಅವರು ರಾಗ ಬಿಬಾಸ್ನಲ್ಲಿ ‘ಗುರುಗುನ ಗಾವೇ’ ಹಾಡನ್ನು ಬಡಾ ಖ್ಯಾಲ್‌ನಲ್ಲಿ ಪ್ರಸ್ತುತಪಡಿಸಿದ ಅವರು ನಂತರ ‘ಜಾಗೋ ಮಹಾಕಾಳಿ’ ಹಾಡನ್ನು ಚೋಟಾ ಖ್ಯಾಲ್‌ನಲ್ಲಿ ಹಾಡಿ ಪ್ರೇಕ್ಷಕರ ಮನಗೆದ್ದರು.

ನಂತರ ಸುಗಮ ಸಂಗೀತದಲ್ಲಿ ಗಜಮುಖನೇ ಜಯತು ಗಜಾನನೆ, ಸುಪ್ರಭಾತ ಸಮಯದಲ್ಲಿ, ದುರ್ಗೆ ಪಾಲಿಸು ಮಾತೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಕಲಾರಸಿಕರನ್ನು ರಂಜಿಸಿದರು. ಇವರಿಗೆ ಕೃಷ್ಣಮೂರ್ತಿ ಕುಲಕರ್ಣಿ ತಬಲಾ ಹಾಗೂ ಎಂ.ವಿ. ಕೋಳಿವಾಡ ಹಾರ್ಮೋನಿಯಂ ಸಾಥ್ ನೀಡಿದರು.

ಸ್ಥಳೀಯ ಕಲಾವಿದರ ಪ್ರತಿಭಾ ಪ್ರದರ್ಶನ

ಲಕ್ಷ್ಮೇಶ್ವರ: ಸ್ಥಳೀಯ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಇನ್ಫೋಸಿಸ್ ಪುಲಿಗೆರೆ ಉತ್ಸವದ ನಿಮಿತ್ತ ಸೋಮವಾರ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪಟ್ಟಣದ ಯುವ ಕಲಾವಿದೆ ಪ್ರಿಯಾಂಕ ಹಾವೇರಿ ಸಾದರಪಡಿಸಿದ ಸಂಗೀತ ಕಚೇರಿಗೆ ಪ್ರೇಕ್ಷಕರು ಮೂಕವಿಸ್ಮಿತರಾದರು.

ಆರಂಭದಲ್ಲಿ ರಾಗ ಭೈರವದಲ್ಲಿ ‘ಜಾಗೋ ಮೋಹನ ಪ್ಯಾರೆ’ ಭಕ್ತಿ ಗೀತೆಯನ್ನು ಚೋಟಾ ಖ್ಯಾಲ್‌ನಲ್ಲಿ ಸಾದರ ಪಡಿಸಿ ತನ್ನ ಪ್ರತಿಭೆಯನ್ನು ಮೆರೆದಳು. ನಂತರ ಸುಗಮ ಸಂಗೀತದಲ್ಲಿ ದಾಸರ ‘ನಿನ್ನ ಧ್ಯಾನವ ಕೊಡೋ’ ಹಾಗೂ ಬಸವಣ್ಣವರ ‘ಮೇರು ಗುಣವನರಿಸುವರೆ ಕಾಗಿಯಲಿ’ ಎಂಬ ಹಾಡುಗಳನ್ನು ಹಾಡಿ ಭೇಷ್‌ ಎನ್ನಿಸಿಕೊಂಡರು.

ಈ ಯುವ ಪ್ರತಿಭೆಯ ಕಲೆಯನ್ನು ಮೆಚ್ಚಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು. ಇವರಿಗೆ ನವೀನ ಕುಲಕರ್ಣಿ ತಬಲಾ ಹಾಗೂ ಎಂ.ವಿ. ಕೋಳಿವಾಡ ಹಾರ್ಮೋನಿಯಂ ಸಾಥ್ ನೀಡಿದರು. ನಂತರ ಮತ್ತೊಬ್ಬ ಯುವ ಕಲಾವಿದ ಪರಶುರಾಮ ಭಜಂತ್ರಿ ಅವರಿಂದ ಸಂಗೀತ ಕಚೇರಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT