ಕಲಬುರ್ಗಿ: ‘ಭೀಮಾ–ಕೋರೆಗಾಂವ್ನಲ್ಲಿ ನಡೆದ ಹಿಂಸಾಚಾರವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ದಲಿತರ ಸ್ವಾಭಿಮಾನ, ಘನತೆ ಮತ್ತು ಆತ್ಮಗೌರವಕ್ಕಾಗಿ ಕೋರೆಗಾಂವ್ ಯುದ್ಧ ನಡೆದಿದೆ. ಶೋಷಣೆಯ ವಿರುದ್ಧ ದಲಿತರು ಸಾರಿದ ಯುದ್ಧದ ನೆನಪಿಗಾಗಿ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತದೆ. ಜ.1ರಂದು ವಿಜಯೋತ್ಸವ ಆಚರಿಸುತ್ತಿದ್ದ ದಲಿತರ ಮೇಲೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ, ಹಿಂದೂ ಏಕತಾ ಆಗಾದಿ ಮತ್ತು ಪೇಶ್ವೆಯ ವಂಶಸ್ಥರು ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಜಿಗ್ನೇಶ್ ಮೇವಾನಿ ಮತ್ತು ಇತರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಕೋರೆಗಾಂವ್ ಹಿಂಸಾಚಾರ ತಡೆಗಟ್ಟಲು ವಿಫಲರಾಗಿರುವ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು. ಮಹಾರಾಷ್ಟ್ರ ದಲಿತ ಸಮುದಾಯಕ್ಕೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಡಾ. ಸಜ್ಜನ ಮಲ್ಲೇಶಿ, ಎಸ್.ಆರ್.ಕೊಲ್ಲೂರ, ಮರೆಪ್ಪ ಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ, ಸಂಜು ಟಿ.ಮಾಲೆ, ಮಹಾಂತೇಶ ಬಡದಾಳ, ಶಿವಶರಣಪ್ಪ ಕೂರನಳ್ಳಿ ಇದ್ದರು.