ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸಿದ್ಧತೆ: ಅಧಿಕಾರಿಗಳ ಸಭೆ

ಜಿಲ್ಲಾಧಿಕಾರಿಗಳು, ರಾಜಕೀಯ ಮುಖಂಡರ ಜತೆ ಚರ್ಚೆ
Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾಧಿಕಾರಿಗಳ ತಂಡ ಮಂಗಳವಾರ ದಿನವಿಡೀ ಸಭೆ ನಡೆಸಿತು.

ವಿವಿಧ ಜಿಲ್ಲಾಧಿಕಾರಿಗಳು, ಎಸ್ಪಿಗಳು, ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ನಡೆಸಿದರು. ರಾಜ್ಯದಲ್ಲಿ ಮುಕ್ತ, ನಿರ್ಭೀತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಉಪಚುನಾವಣಾ ಆಯುಕ್ತರಾದ ಉಮೇಶ್‌ ಸಿನ್ಹಾ, ಸಂದೀಪ್‌ ಸಕ್ಸೇನಾ ಅವರು ಮಾಹಿತಿ ಪಡೆದರು.

ರಾಜ್ಯದಲ್ಲಿ ವಿವಿಧ ಪರೀಕ್ಷೆಗಳು, ಹಬ್ಬ ಮತ್ತು ಜಾತ್ರೆಗಳ ಬಗ್ಗೆ ಮಾಹಿತಿ ಪಡೆದ ಅವರು, ಯಾವಾಗ ಚುನಾವಣೆ ನಡೆಸಿದರೆ ಸೂಕ್ತ ಎಂಬ ಅಭಿಪ್ರಾಯವನ್ನೂ ಹಿರಿಯ ಅಧಿಕಾರಿಗಳಲ್ಲಿ ಕೇಳಿದರು. ಚುನಾವಣೆಯಲ್ಲಿ ವಿವಿಪ್ಯಾಟ್‌ ಒಳಗೊಂಡ ವಿದ್ಯುನ್ಮಾನ ಮತಯಂತ್ರ ಬಳಸುವುದರಿಂದ ಅದಕ್ಕೆ ಪೂರಕವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವ ಪ್ರತಿಯೊಬ್ಬ ಸಿಬ್ಬಂದಿಗೂ ತರಬೇತಿ ನೀಡಬೇಕು ಎಂದು ಅವರು ಸೂಚಿಸಿದರು.

ವಿವಿಪ್ಯಾಟ್‌ ಒಳಗೊಂಡ ಮತಯಂತ್ರದ ಬಗ್ಗೆ ಮಾಹಿತಿಯನ್ನು ನೀಡಲು ತಜ್ಞರೂ ದೆಹಲಿಯಿಂದ ಬಂದಿದ್ದರು. ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಗಲಭೆಗಳು ನಡೆದಿರುವ ಕಾರಣ ಕಾನೂನು– ಸುವ್ಯವಸ್ಥೆ ಸ್ಥಿತಿ, ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳು ಮತ್ತು ಮತಗಟ್ಟೆಗಳ ಬಗ್ಗೆ ಮಾಹಿತಿ ಕೇಳಿದರು. ಇದರ ಆಧಾರದಲ್ಲಿ ಎಷ್ಟು ಹಂತಗಳಲ್ಲಿ ಮತದಾನ ನಡೆಸಬೇಕಾಗುತ್ತದೆ ಹಾಗೂ ಭದ್ರತೆ ವ್ಯವಸ್ಥೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಪ್ರತಿನಿಧಿಗಳು ಬೆಳಿಗ್ಗೆ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿದರು. ಮತದಾರರ ನೋಂದಣಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ‘ ಆದಷ್ಟು ಬೇಗ ಮತದಾರರ ನೋಂದಣಿ ಪ್ರಕ್ರಿಯೆ ಆಗಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆಯಲ್ಲಿ ಎಚ್ಚರಿಕೆ ವಹಿಸಬೇಕು.ನ್ಯಾಯ ಮತ್ತು  ಪಾರದರ್ಶಕವಾಗಿ ಚುನಾವಣೆ ನಡೆಸಬೇಕು’ ಎಂದು ಮನವಿ ಮಾಡಿದ್ದಾಗಿ ಬಿಜೆಪಿ ವಕ್ತಾರ ವಿವೇಕ್‌ ರೆಡ್ಡಿ ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಸಿಪಿಎಂ ನಾಯಕ ಮಾರುತಿ ಮಾನ್ಪಡೆ, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಇರುವ ಸಂದೇಹಗಳನ್ನು ಅವರ ಮುಂದೆ ಪ್ರಸ್ತಾಪಿಸಿದೆವು. ಮತ
ಯಂತ್ರದ ಬಗ್ಗೆ ಸಂಶಯಪಡುವ ಅಗತ್ಯವಿಲ್ಲ ಎಂದು ಚುನಾವಣಾಧಿಕಾರಿಗಳು ಭರವಸೆ ನೀಡಿದರು.

ಚುನಾವಣಾ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT