ಪಾವಗಡ: ‘ತಾಲ್ಲೂಕಿನಲ್ಲಿ ಕಾಂಗ್ರೆಸ್ ನಡಿಗೆ ಮಟ್ಕಾ ಕಡೆಗೆ’ ಎಂದು ಪುರಸಭೆ ಸದಸ್ಯ ಮಣಿ ಟೀಕಿಸಿದರು. ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡ ವೆಂಕಟರವಣಪ್ಪ ಅವರ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಮಟ್ಕಾ ಜೂಜಾಟಕ್ಕೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲದ
ಬಗ್ಗೆ ಪ್ರಚಾರ ಮಾಡಬೇಕಾಗುತ್ತದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪುರಸಭೆ ಸದಸ್ಯ ಮನು ಮಹೇಶ್ ಮಾತನಾಡಿ, ‘ಕಾಂಗ್ರೆಸ್ ತಾಲ್ಲೂಕು ಯುವ ಘಟಕದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿರುವವರಿಗೆ ಸ್ಥಾನ ಕೊಡಲಾಗಿದೆ. ಆದರೆ ಜೆಡಿಎಸ್ ಯುವ ಘಟಕದಲ್ಲಿ ಇಂತವರು ಯಾರೂ ಇಲ್ಲ. ತಾಲ್ಲೂಕಿನಾದ್ಯಂತ ಮಟ್ಕಾ ವಿರುದ್ಧ ಹೋರಾಟ ಮಾಡಲಾಗಿದೆ’ ಎಂದು ತಿಳಿಸಿದರು.
‘ಶೀಘ್ರ ಮಟ್ಕಾ ಜೂಜಾಟ ನಿಲ್ಲಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಪುರಸಭೆ ಸದಸ್ಯ ವಸಂತಕುಮಾರ್, ಜಿ.ಎ.ವೆಂಕಟೇಶ್, ಮುಖಂಡ ಗೋವರ್ಧನ್, ಜಯಂತ್ ನಾಗಣ್ಣ, ಗಂಗಾಧರ್, ವಕೀಲ ಎನ್.ರವೀಂದ್ರ, ಬ್ರಹ್ಮೇಂದ್ರ ಇದ್ದರು.