ನವದೆಹಲಿ: 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣಗಳ ಮರು ತನಿಖೆಗೆ ಮೂವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಎಸ್ಐಟಿ ಒಟ್ಟು 186 ಪ್ರಕರಣಗಳ ಮರುತನಿಖೆ ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಸಮಿತಿಯು, ಕರ್ತವ್ಯದಲ್ಲಿರುವ ಹಾಗೂ ಡಿಐಜಿ ಶ್ರೇಣಿಯ ನಿವೃತ್ತ ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಿರಬೇಕು ಎಂದಿರುವ ಪೀಠ, ಸಮಿತಿಯಲ್ಲಿ ಇರಬೇಕಾಗಿರುವವರ ಹೆಸರನ್ನು ಸೂಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ದಂಗೆಯ ತನಿಖೆ ಕುರಿತಂತೆ, ಕೋರ್ಟ್ 2017ರ ಆಗಸ್ಟ್ನಲ್ಲಿ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯು, ತನ್ನ ವರದಿಯನ್ನು ಕೋರ್ಟ್ಗೆ ನೀಡಿತು. ಸುಪ್ರಿಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜೆ.ಎಂ. ಪಂಚಲ್ ಸಮಿತಿಯ ನೇತೃತ್ವ ವಹಿಸಿದ್ದರು. ಆಗ ಒಟ್ಟು 241 ಪ್ರಕರಣಗಳು ದಾಖಲಾಗಿದ್ದವು. ಆ ಪ್ರಕರಣ ಪೈಕಿ 186 ಪ್ರಕರಣಗಳನ್ನು ತನಿಖೆ ನಡೆಸದೇ ಮುಗಿಸಿದ್ದರಿಂದ ಆ ಪ್ರಕರಣಗಳ ಮರು ತನಿಖೆಗೆ ಈಗ ಕೋರ್ಟ್ ಮುಂದಾಗಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕ 1984 ಅಕ್ಟೋಬರ್ 31ರಂದು ಹತ್ಯೆ ಮಾಡಿದ ನಂತರ ಸಿಖ್ ವಿರೋಧಿ ದಂಗೆ ಶುರುವಾಗಿತ್ತು. ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಒಟ್ಟು 3,325 ಸಂತ್ರಸ್ತರ ಪೈಕಿ ದಿಲ್ಲಿಯೊಂದರಲ್ಲೇ 2,733 ಮಂದಿ ಬಲಿಯಾಗಿದ್ದರು.