ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ಯಶ್ರೀ ಆತ್ಮಹತ್ಯೆ ಪ್ರಕರಣ, ಮತ್ತೆ ಮೂರು ಪ್ರಕರಣ ದಾಖಲಿಸಲು ಕ್ರಮ: ಅಣ್ಣಾಮಲೈ

Last Updated 10 ಜನವರಿ 2018, 16:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದ್ದು, ಧನ್ಯಶ್ರೀ ತಂದೆ ಯಾದವಸುವರ್ಣ ಅವರಿಗೆ ಕೆಲವರು ಒತ್ತಡ ಹೇರಿ ಪೊಲೀಸರಿಗೆ ತಪ್ಪು ಮಾಹಿತಿ ನೀಡುವಂತೆ ಮಾಡಿರುವುದು ಗೊತ್ತಾಗಿದೆ. ತಪ್ಪು ಮಾಹಿತಿ ನೀಡುವಂತೆ ಮಾಡಿದ ಕೆಲ ಸಂಘಟನೆಗಳ ಯುವಕರನ್ನು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇಲ್ಲಿ ಬುಧವಾರ ತಿಳಿಸಿದರು.

‘ಯಾದವ ಸುವರ್ಣ ನೀಡಿರುವ ದೂರಿನಲ್ಲಿರುವ ಅಂಶ, ಪೊಲೀಸರಿಗೆ ಸಿಕ್ಕಿರುವ ಮರಣ ಪತ್ರದಲ್ಲಿನ (ಡೆತ್‌ನೋಟ್‌ಗ) ಸಂಗತಿ  ಭಿನ್ನವಾಗಿದೆ. ಸುಳ್ಳು ಮಾಹಿತಿ ಕೊಡಿಸಿ, ತನಿಖೆ ದಾರಿ ತಪ್ಪಿಸಲು ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗಿವೆ. ಸಂಘಟನೆಗಳ ಯುವಕರ ವಿರುದ್ಧ ಐಪಿಸಿ 182 ನಡಿ ಪ್ರಕರಣ ದಾಖಲಿಸಿ, ದಾರಿ ತಪ್ಪಿಸಿದ ಯುವಕರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜ.7ರಂದು ಧನ್ಯಶ್ರೀ ತಾಯಿ ಸರಸ್ವತಿ ಅವರ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ದೂರು ಪ್ರತಿಯನ್ನು ಸರಸ್ವತಿ ಅವರಿಗೆ ಪೊಲೀಸರು ಓದಿ ಹೇಳಿದ್ದಾರೆ. ಇದನ್ನು ವಿಡಿಯೋ ಮಾಡಲಾಗಿದೆ. ತಾಯಿ ದೂರು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಕೆಲ ಸಂಘಟನೆಗಳವರು ಪಿಎಸ್ಐ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ. ಕೆಲ ಸಂಘಟನೆಗಳ ನಾಯಕರು ಚಾನೆಲ್‌ಗಳಲ್ಲಿ ಹೇಳಿಕೆ ನೀಡಿದ್ದಾರೆ. ಧನ್ಯಶ್ರೀ ಮನೆಗೆ ಹೋಗಿ, ಮಾತುಕತೆ ಮಾಡಿದ್ದೇವೆ ಎಂದು ಮಾಧ್ಯಮದಲ್ಲಿ ಅವರು ಒಪ್ಪಿಕೊಂಡಂತಾಗಿದೆ.  ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವವರು ಮಾಧ್ಯಮಗಳ ಮುಂದೆ ಏನೇನೂ ಹೇಳಿಕೆ ನೀಡಬಾರದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವಾಹಿನಿಗಳಿಗೂ ನೋಟಿಸ್‌ ನೀಡಲಾಗುವುದು’ ಎಂದು ಹೇಳಿದರು.

‘ಪ್ರಕರಣದಲ್ಲಿ ಪಿಎಸ್‌ಐಯವರು ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸಂಘಟನೆಯ ನಾಯಕರೊಬ್ಬರು ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಾಕಿದ್ದಾರೆ. ಪಿಎಸ್‌ಐ ಅವರ ಧರ್ಮದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಂಘಟನೆ ನಾಯಕನ ವಿರುದ್ಧ ಐಪಿಸಿ 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ), ಐಪಿಸಿ 153–ಎ(ಸಾಮರಸ್ಯ ಹಾಳು ಮಾಡುವುದು) ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಸರಸ್ವತಿ ನೀಡಿರುವ ದೂರಿನ ಅನ್ವಯ ಐಪಿಸಿ 306( ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಲಾಗಿತ್ತು. ಈ ದೂರಿಗೆ ಐಪಿಸಿ 153–ಎ(ಸಾಮರಸ್ಯ ಹಾಳು ಮಾಡುವುದು) ಪ್ರಕರಣ ಸೇರ್ಪಡೆ ಮಾಡುತ್ತೇವೆ’ ಎಂದರು. ‘ಮೂಡಿಗೆರೆಯ ಬಜರಂಗದಳದವರು ಎಂದು ಹೇಳಿಕೊಂಡು ‘ಹಿಂದೂ ಹುಡುಗಿಯರಿಗೆ ಎಚ್ಚರಿಕೆ’ ಎಂಬ ಸಂದೇಶವೊಂದನ್ನು ವಾಟ್ಸಾಪ್‌ನಲ್ಲಿ ವೈರಲ್‌ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಗುರುತಿಸಲಾಗಿದೆ. ಅವರೆಲ್ಲರೂ ಮೂಡಿಗೆರೆಯವರು. ಈ ಬಗ್ಗೆಯೂ ಪ್ರಕರಣ ದಾಖಲಿಸುತ್ತೇವೆ’ ಎಂದರು.

‘ ವಿದ್ಯಾರ್ಥಿನಿ ಧನ್ಯಶ್ರೀ  ಜತೆ ತುಳು ಭಾಷೆಯಲ್ಲಿ ವಾಟ್ಸಾಪ್‌ನಲ್ಲಿ ಚಾಟ್‌ ಮಾಡಿರುವುದು ಸಂತೋಷ್‌ ಅಲ್ಲ. ಅವರು ಜತೆ ಚಾಟ್‌ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಆರೋಪಿಯ ಶೋಧಕ್ಕೆ ವಿಶೇಷ ತಂಡ ನೇಮಿಸಲಾಗಿದೆ’ ಎಂದರು. ‘ಮೂಡಿಗೆರೆಯಲ್ಲಿ ಗಿರಿವಾಹಿನಿ ಪತ್ರಿಕೆಯ ನಯನ ಎಂಬುವರು ಧನ್ಯಶ್ರೀ ಅವರ ತಾಯಿ ಜತೆ ವಿಚಾರಣೆ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ನಯನ ಅವರಿಗೆ ನೋಟಿಸ್‌ ನೀಡಲಾಗುವುದು’ ಎಂದರು.

‘ಜ.5ರಂದು ಬೆಳಿಗ್ಗೆ ಕೆಲ ಯುವಕರು ಏಕಾಏಕಿ ಧನ್ಯಶ್ರೀ ಮನೆಗೆ ಹೋಗಿ ಅವರ ತಾಯಿಯನ್ನು ಬೈಯ್ದಿದ್ದಾರೆ. ಈ ಸಂದರ್ಭದಲ್ಲಿ ಧನ್ಯಶ್ರಿ ಮನೆಯಲ್ಲಿ ಇರಲಿಲ್ಲ. ಧನ್ಯಶ್ರೀ ಮನೆಯಲ್ಲಿದ್ದಾಗ ಯುವಕರು ಸಂಜೆ ಹೋಗಿ ಮತ್ತೆ ಬೈಯ್ದಿದ್ದಾರೆ. ಧನ್ಯಶ್ರೀ ಅವರು ಎರಡು ದಿನ ಊಟ ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ’ ಎಂಬುದು ಗೊತ್ತಾಗಿದೆ. ‘ಧನ್ಯಶ್ರೀ ಮನೆಗೆ ತೆರಳಿದ ಯುವಕರು ಯಾರು ಎಂಬುದನ್ನು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಬೆಳಗಾವಿ, ಕಲಬುರ್ಗಿ ಕಡೆಗಳಿಗೆ ತಂಡಗಳನ್ನು ಕಳಿಸಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT