ಭಾರತವೆಂದರೆ ಒಂದು ನಿರ್ದಿಷ್ಟವಾದ ಜಾತಿ, ಜನಾಂಗ, ಭಾಷಿಕರ ರಾಷ್ಟ್ರವಲ್ಲ. ಅದು ಎಲ್ಲರನ್ನೂ ಒಳಗೊಂಡುದಾಗಿದೆ. ಭೀಮಾ ಕೋರೆಗಾಂವ್ ದ್ವಿಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಡೆದಿರುವ ಹೋರಾಟ, ಚರ್ಚೆಗಳಲ್ಲಿ ಸಮಾಜವನ್ನು ಎರಡು ಗುಂಪುಗಳಾಗಿ ಪ್ರತ್ಯೇಕಿಸುವ ಹುನ್ನಾರುಗಳು ಗೋಚರವಾಗುತ್ತಿವೆ. ಇದು ಮುಂದಿನ ಸಂಘರ್ಷಕ್ಕೆ ಕಾರಣವಾಗುವ ಅಪಾಯವನ್ನು ಅರಿಯಬೇಕಾಗಿದೆ. ನಮ್ಮ ತಿಳಿವಳಿಕೆ, ಪ್ರತಿಭಟನೆಗಳು ಸೈದ್ಧಾಂತಿಕವಾಗಿರುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತಿರುವುದು ಅಗತ್ಯ. ಆದರೆ ಇಂದು ಜಾತಿಯನ್ನು ಮುಂದುಮಾಡಿಕೊಂಡು ನಡೆಯುವ ವಿಭಜಿಸುವ ಪ್ರಯತ್ನಗಳು ‘ಒಳಗೊಳ್ಳುವಿಕೆ’ಯ ದಾರಿಯನ್ನು ಇಲ್ಲವಾಗಿಸುತ್ತಿವೆ.