ನವದೆಹಲಿ : ದಕ್ಷಿಣ ಭಾರತದ ಎರಡು ಪ್ರಮುಖ ಚಿನ್ನಾಭರಣ ಮಾರಾಟ ಸಂಸ್ಥೆಗಳಿಗೆ ಸೇರಿದ 132 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ.
ಕೇರಳದ ಚಿನ್ನಾಭರಣ ಮಳಿಗೆಗಳ ಸಮೂಹ ಜೋಯಾಲುಕ್ಕಾಸ್ ಮತ್ತು ಅದಕ್ಕೆ ಸಂಬಂಧಿಸಿದ ಇನ್ನೊಂದು ಸಂಸ್ಥೆಯ ಮಳಿಗೆಗಳು ಮತ್ತು ಶಾಖೆಗಳಲ್ಲಿ ತಪಾಸಣೆ ನಡೆಸಲಾಗಿದೆ.
‘ನೋಟು ರದ್ದತಿಯ ನಂತರ ಎರಡೂ ಸಂಸ್ಥೆಗಳು ತೆರಿಗೆ ವಂಚನೆಯಲ್ಲಿ ತೊಡಗಿವೆ ಎಂಬ ಆರೋಪಗಳ ಆಧಾರದಲ್ಲಿ ತಪಾಸಣೆ ನಡೆಸಲಾಗಿದೆ. ಭಾರಿ ಪ್ರಮಾಣದ ನಗದು ಮತ್ತು ಚಿನ್ನ, ವಜ್ರ ಹಾಗೂ ಆಭರಣಗಳ ಮಾರಾಟದ ವಿವರಗಳು ಪತ್ತೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ತ್ರಿಶೂರ್ ಸೇರಿದಂತೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳಗಳ 132 ಕಡೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆಯ ಚೆನ್ನೈ ಘಟಕದ ನೇತೃತ್ವದಲ್ಲಿ ದೇಶದಾದ್ಯಂತ ನಡೆದಿರುವ ಈ ತಪಾಸಣೆಯಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಹಲವು ಪೊಲೀಸರ ತಂಡ ಭಾಗಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ: ಬೆಂಗಳೂರಿನ ಮಲ್ಲೇಶ್ವರ, ಜಯನಗರ, ಎಂ.ಜಿ. ರಸ್ತೆ, ವೈಟ್ಫೀಲ್ಡ್, ಮಾರತ್ಹಳ್ಳಿಯಲ್ಲಿನ ಚಿನ್ನಾಭರಣ ಮಳಿಗೆಗಳ ಮೇಲೆ 43 ಅಧಿಕಾರಿಗಳ ತಂಡ ಶೋಧ ನಡೆಸುತ್ತಿದೆ.
ಶಿವಮೊಗ್ಗ, ದಾವಣಗೆರೆ, ಮಂಗಳೂರು, ಹಾಸನದಲ್ಲೂ ಚಿನ್ನಾಭರಣ ಮಳಿಗೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ತೆರಿಗೆ ವಂಚನೆ ಆರೋಪದಲ್ಲಿ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ.
ಪ್ರತಿಷ್ಠಿತ ಹೋಟೆಲ್ಗಳು ಮತ್ತು ಅತಿಥಿ ಗೃಹಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಐ.ಟಿ ಅಧಿಕಾರಿಗಳು ತಿಳಿಸಿದ್ದಾರೆ.