ನವದೆಹಲಿ: ಇಲ್ಲಿನ ಕೆಂಪುಕೋಟೆ ಮೇಲೆ 2000ನೇ ಇಸವಿಯಲ್ಲಿ ನಡೆದಿದ್ದ ಉಗ್ರ ದಾಳಿಯ ಆರೋಪಿ, ಲಷ್ಕರ್ ಎ ತೊಯ್ಬಾದ ಶಂಕಿತ ಉಗ್ರ ಬಿಲಾಲ್ ಕಾವಾನನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಗುಜರಾತ್ನ ಭಯೋತ್ಪಾದನೆ ನಿಗ್ರಹ ದಳ ಮತ್ತು ದೆಹಲಿ ಪೊಲೀಸರು ಬುಧವಾರ ಸಂಜೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಿಲಾಲ್ನನ್ನು ಬಂಧಿಸಲಾಗಿದೆ.
ಬಿಲಾಲ್ ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾನೆ ಎಂದು ಗುಜರಾತ್ನ ಭಯೋತ್ಪಾದನೆ ನಿಗ್ರಹ ದಳ ನೀಡಿದ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದೆಹಲಿ ವಿಮಾನ ನಿಲ್ದಾಣದ ಟಿ3 ಟರ್ಮಿನಲ್ನಲ್ಲಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2000ನೇ ಇಸವಿಯಿಂದ ತಲೆಮರೆಸಿಕೊಂಡಿರುವ ಬಿಲಾಲ್ ಕಾಶ್ಮೀರದಲ್ಲಿ ಅಡಗಿದ್ದ. ಕೆಂಪುಕೋಟೆಯ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಮೂವರು ನಾಗರಿಕರು ಮತ್ತು ಇಬ್ಬರು ಯೋಧರು ಮೃತಪಟ್ಟಿದ್ದರು.