ಉಚ್ಚಂಗಿದುರ್ಗ: ಬಿಜೆಪಿ ನಾಯಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ ಎಂದು ರಾಜ್ಯ ಜವಳಿ ಮತ್ತು ಮುಜರಾಯ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರು ತಿಳಿಸಿದರು.
ಹರಪನಹಳ್ಳಿ ತಾಲ್ಲೂಕು ರಾಮಘಟ್ಟ ದೊಡ್ಡ ತಾಂಡದ ಶ್ರೀ ಕಲ್ಲೇಶ್ವರ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಸಿಲಕಿರುವ ಬಿಜೆಪಿ ನಾಯಕರು ರಾಷ್ಟ್ರ ನಾಯಕರಾದ ಅಮಿತ್ ಷಾ, ನರೇಂದ್ರ ಮೋದಿಯವರಿಗೆ ದುಂಬಾಲು ಬಿದ್ದಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಭಯವಿಲ್ಲ ಎಂದರು.
ಸರ್ಕಾರ 5 ವರ್ಷಗಳಲ್ಲಿ ಹಸಿವು ಮುಕ್ತ ಕರ್ನಾಟಕ, ಶಾದಿ ಭಾಗ್ಯ, ಇಂದಿರಾ ಕ್ಯಾಂಟಿನ್ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮತದಾರರು ಕಾಂಗ್ರೆಸ್ ಕೈ ಬಿಡುವುದಿಲ್ಲ ಎಂದರು.
ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಹೇಳಿಕೆ ನೀಡಿರುವ ಅನಂತ ಕುಮಾರ ಹೆಗಡೆ ಅವರಿಗೆ ನಾಡಿನ ಜನರು ತಕ್ಕ ಪಾಠ ಕಲಿಸಲಿದ್ದಾರೆ, ಏಕವಚನ ಪದ ಬಳಕೆ ಶೋಭೆ ತುರುವುದಿಲ್ಲ ಎಂದರು.
ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇದ್ದು, ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸುತ್ತೇನೆ ಎಂದರು.