ಮೈಸೂರು: ಬೀಡಿ ಕೇಳಿದ ಎಂದು ಮುರಳಿ ಎಂಬುವವರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ರಕ್ಷಿಸಲು ಬಂದ ಸಂತೋಷ್ಕುಮಾರ್ ಎಂಬುವವರನ್ನು ಕೊಲೆಗೈದ ಆರೋಪಿ ಮಹದೇವಪ್ರಸಾದ್ನಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಘಟನೆ ವಿವರ: ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ಮುರಳಿ ಅವರಿಗೂ ಆರೋಪಿ ಮಹದೇವಪ್ರಸಾದ್ನಿಗೂ ಬೀಡಿ ವಿಚಾರಕ್ಕೆ 2012ರ ಮೇನಲ್ಲಿ ಜಗಳ ನಡೆಯಿತು. ಈ ವಿಚಾರವಾಗಿ ದ್ವೇಷ ಸಾಧಿಸಿದ ಆರೋಪಿ ಮಹದೇವಪ್ರಸಾದ್ ಹಾಗೂ ಇತರರು ಕೆಲಸ ಮುಗಿಸಿ ಬರುತ್ತಿದ್ದ ಮುರಳಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಈ ವೇಳೆ ಮುರಳಿ ಅವರನ್ನು ರಕ್ಷಿಸಲು ಬಂದ ಸಂತೋಷ್ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಇದರಿಂದ ಸಂತೋಷ್ ಮೃತಪಟ್ಟಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಮಹದೇವಪ್ರಸಾದ್ನಿಗೆ ಜೀವಾವಧಿ ಶಿಕ್ಷೆ ಹಾಗೂ ₹ 12 ಸಾವಿರ ದಂಡ ವಿಧಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವಾಸಂತಿ ಎಂ.ಅಂಗಡಿ ವಾದ ಮಂಡಿಸಿದ್ದರು.