ಮೈಸೂರು: ‘ಆರ್ಎಸ್ಎಸ್ ಮತ್ತು ಬಜರಂಗದಳದವರು ಹಿಂದುತ್ವ ಉಗ್ರಗಾಮಿಗಳು ಹಾಗೂ ಹಿಂದುತ್ವ ಮತ್ತು ಮನುಷ್ಯತ್ವ ಇಲ್ಲದ ಉಗ್ರಗಾಮಿಗಳು. ನಾವೆಲ್ಲಾ ಮನುಷ್ಯತ್ತ ಇರುವ ಹಿಂದುಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎಚ್ಡಿ ಕೋಟೆ ತಾಲ್ಲೂಕಿನ ಸರಗೂರುನಲ್ಲಿ ಸಾಧನ ಸಂಭ್ರಮ ಕಾರ್ಯಕ್ರಮಕ್ಕೆ ಬಂದ ವೇಳೆ ಗುರುವಾರ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ’ ಎಂದರು.
‘ಬಜರಂಗದಳವರನ್ನು ನಾವು ನಿಷೇದ ಮಾಡಿಲ್ಲ ಎಂದರೆ ಬೆಂಬಲ ನೀಡುತ್ತೇವೆ ಎಂದಲ್ಲ. ಕೋಮುವಾದ ಭಾವನೆ ಕೆರೆಳಿಸಿದೆರೆ ಅದು ಯಾವುದೇ ಸಂಘಟನೆಯಾದರು ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿಎಂ ಹೇಳಿದರು.
ಈ ಮೂಲಕ ಸಿದ್ದರಾಮಯ್ಯ ಅವರು, ಬುಧವಾರ ಚಾಮರಾಜನಗರ ತಾಲ್ಲೂಕಿನ ನಾವಳ್ಳಿಯಲ್ಲಿ ‘ಆರ್ಎಸ್ಎಸ್, ಬಜರಂಗದಳದವರೇ ಉಗ್ರಗಾಮಿಗಳು’ ಎಂದು ತಾವು ನೀಡಿದ್ದ ಹೇಳಿಕೆಗೆ ಮತ್ತಷ್ಟು ವಿವರಣೆ ನೀಡಿದರು.