ಪ್ರಜಾವಾಣಿ ‘ಭೂಮಿಕಾ’ ಪ್ರಬಂಧ ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ ಎನ್ನುವುದಕ್ಕೆ ಬರಹಗಾರ್ತಿಯರ ಉತ್ಸಾಹವೇ ಸಾಕ್ಷಿಯಾಗಿದೆ. ಪ್ರಬಂಧಗಳನ್ನು ಕಳುಹಿಸಲು ನೀಡಿದ್ದ ಕೊನೆಯ ದಿನದ ಬಳಿಕವೂ ಬರಹಗಳು ಬರುತ್ತಲೇ ಇದ್ದವು! ನಾಡಿನ ವಿವಿಧ ಪ್ರದೇಶಗಳಿಂದ ಬೇರೆ ಬೇರೆ ವಯೋಮಾನದ, ಸಮಾಜದ ಬೇರೆ ಬೇರೆ ಕ್ಷೇತ್ರಗಳ ಮಹಿಳೆಯರು ಭಾಗವಹಿಸಿದ್ದರು; ಹಿರಿಯ ಬರಹಗಾರರು ಸೇರಿದಂತೆ ಕೆಲವು ಪುರುಷರೂ ಪ್ರಬಂಧಗಳನ್ನು ಕಳುಹಿಸಿದ್ದರು!
ಇಂದು ಪ್ರಬಂಧ ಪ್ರಕಾರವೇ ಮರೆಯಾಗುತ್ತಿದೆ ಎಂಬ ಆತಂಕ ಸಾಹಿತ್ಯವಲಯದಲ್ಲಿ ವ್ಯಕ್ತವಾಗುತ್ತಿರುತ್ತದೆ. ಆದರೆ ನಮಗೆ ಬಂದ ಪ್ರಬಂಧಗಳ ಸಂಖ್ಯೆಯನ್ನೂ ಗುಣಮಟ್ಟವನ್ನೂ ನೋಡಿದರೆ ಇಂಥ ಆತಂಕಕ್ಕೆ ಕಾರಣವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಬಂಧಗಳನ್ನು ಕಳುಹಿಸಿರುವವರಲ್ಲಿ ಪ್ರಸಿದ್ಧರೂ ಇದ್ದಾರೆ; ಮೊದಲ ಬಾರಿಗೆ ಬರಹವನ್ನು ಮಾಡಿದವರೂ ಇದ್ದಾರೆ. ಒಟ್ಟಾರೆಯಾಗಿ ಕನ್ನಡ ಸಾಹಿತ್ಯದ ಬೆಳವಣಿಗೆಗೂ ಸಮೃದ್ಧಿಗೂ ಈ ಪ್ರಬಂಧಗಳು ದಿಕ್ಸೂಚಿಯಂತಿವೆ.
ವಿಮರ್ಶಕ ಓ. ಎಲ್. ನಾಗಭೂಷಣಸ್ವಾಮಿ ಮತ್ತು ಕಥೆಗಾರ್ತಿ ಸುನಂದಾ ಕಡಮೆ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕೊನೆಯ ಸುತ್ತನ್ನು ತಲುಪಿದ ಇಪ್ಪತ್ತೊಂಬತ್ತು ಪ್ರಬಂಧಗಳಲ್ಲಿ ಆರನ್ನು ಆರಿಸಿರುವ ಅವರು, ಎಲ್ಲ ಬರಹಗಾರ್ತಿಯರಿಗೆ ಅನ್ವಯವಾಗುವಂಥ ಮಾರ್ಗದರ್ಶಕ ಮಾತುಗಳನ್ನು ನೀಡಿದ್ದಾರೆ. ಈ ಇಬ್ಬರಿಗೂ ಕೃತಜ್ಞತೆಗಳು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳು.
ನಿಮ್ಮ ಬರವಣಿಗೆಯ ಪ್ರೀತಿ ಎಂದೂ ಮಾಸದಿರಲಿ. ಬಹುಮಾನವನ್ನು ಪಡೆದವರಿಗೆ ಅಭಿನಂದನೆಗಳು.
–ಸಂಪಾದಕ
ಫಲಿತಾಂಶದ ವಿವರ:
* ಮೊದಲನೆಯ ಬಹುಮಾನ: ರೂ. 7, 500 - ಊರ ದನಗಳ ಕುರಿತು ನೂರೆಂಟು ನೆನಪು / ಸಹನಾ ಕಾಂತಬೈಲು
* ಎರಡನೆಯ ಬಹುಮಾನ: ರೂ. 5,000 - ದೀಪವಿರದ ಮನಗಳು / ರೇಣುಕಾ ನಿಡಗುಂದಿ
* ಮೂರನೆಯ ಬಹುಮಾನ: ರೂ. 2,500 - ಕಿಂಕಿಣಿಸುವ ಕಂಕಣ / ಜಯಶ್ರೀ ಹೆಗಡೆ
ಮೆಚ್ಚುಗೆ ಪಡೆದ ಪ್ರಬಂಧಗಳು:
1. ಕೈಮುರಿದುಕೊಂಡ ಶುಭ ಗಳಿಗೆ / ಕರ್ಣಂ ಸಂಧ್ಯಾ
2. ಲಜ್ಜೆಯಿಲ್ಲದ ಗೆಜ್ಜೆನಾದ / ಸ್ಮಿತಾ ಅಮೃತರಾಜ್
3. ಒಲೆಯ ಉರಿಯ ಮುಂದೆ / ಸುನೀತ ಕುಶಾಲನಗರ