ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆ ಬಳಿ ಬುಧವಾರ ಸಂಜೆ ಮಗುಚಿ ಬಿದ್ದು ಗ್ಯಾಸ್ ಸೋರಿಕೆಯಾಗುತ್ತಿದ್ದ ಎಲ್ಪಿಜಿ ಟ್ಯಾಂಕರ್ ಅನ್ನು ಗುರುವಾರ ಬೆಳಿಗ್ಗೆ 9ಗಂಟೆ ವೇಳೆಗೆ ತೆರವುಗೊಳಿಸಲಾಯಿತು.
ಈ ಘಟನೆಯಿಂದಾಗಿ 18 ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಬದಲಿ ಮಾರ್ಗಗಳಲ್ಲಿ ವಾಹನ ಸಾಗಲು ಅವಕಾಶ ಕಲ್ಪಿಸಲಾಗಿತ್ತು. ಬೇರೆ ಟ್ಯಾಂಕರ್ಗೆ ಗ್ಯಾಸ್ ವರ್ಗಾಯಿಸುವ ವೇಳೆ ಅಪಾಯ ಸಂಭವಿಸಬಾರದು ಎಂಬ ಕಾರಣಕ್ಕೆ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.