ಬೆಂಗಳೂರು: ‘ಕೆಪಿಸಿಸಿ ರಾಜ್ಯ ಘಟಕಕ್ಕೆ ಶೀಘ್ರದಲ್ಲೆ ಸಮರ್ಥ ವಕ್ತಾರರನ್ನು ನೇಮಿಸಲಾಗುವುದು’ ಎಂದು ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮೂರು ದಿನಗಳಿಂದ ಪಕ್ಷದ ಮಹಿಳಾ ಘಟಕ, ಯುವ ಘಟಕ, ಎನ್ಎಸ್ಯುಐ, ಮಾಧ್ಯಮ ಘಟಕಗಳ ಜೊತೆ ಚರ್ಚೆ ನಡೆಸಿದ ಅವರು, ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
‘ವಕ್ತಾರರಾಗಲು ಬಯಸಿ 2,500ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಮೂರು ದಿನ ಸುಮಾರು 500 ಜನರ ಸಂದರ್ಶನ ನಡೆಸಿದ್ದೇನೆ. ಇನ್ನೊಂದು ಸುತ್ತಿನ ಚರ್ಚೆಯ ಬಳಿಕ ಹೆಸರು ಅಂತಿಮಗೊಳಿಸಲಾಗುವುದು’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕರ್ನಾಟಕದ ಮತದಾರರು ಕಾಂಗ್ರೆಸ್ ಪರವಾಗಿ ಇದ್ದಾರೆ. ನಮಗೆ ಹೇಳಿಕೊಳ್ಳಲು ಹಲವು ವಿಷಯಗಳಿವೆ. ಅದನ್ನು ಜನ ಸ್ವೀಕರಿಸುವ ನಂಬಿಕೆ ಇದೆ’ ಎಂದರು.
‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಜೆಂಡಾ ಜನರಿಗೆ ಗೊತ್ತಿದೆ. ಅದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ’ ಎಂದೂ ಹೇಳಿದರು.
ಅಮಿತ್ ಷಾ ವಿರುದ್ದ ಟೀಕೆ:
‘ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅನುದಾನದ ಬಗ್ಗೆ ಪ್ರಶ್ನಿಸಲು ಅಮಿತ್ ಷಾ ಯಾರು. ಇವರೇನು ಹಣಕಾಸು ಮಂತ್ರಿಯೇ. ರಾಜ್ಯ ನ್ಯಾಯಬದ್ಧವಾಗಿ ಕೇಂದ್ರದಿಂದ ತನ್ನ ಪಾಲು ಪಡೆದುಕೊಂಡಿದೆ’ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.