ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಓಟದ ವಿಭಾಗದಲ್ಲಿ ಸಕಲೇಶ್ವರ್, ಉಮಾ ಮತ್ತು ತಿಪ್ಪೇಸ್ವಾಮಿ ಗಮನಾರ್ಹ ಸಾಧನೆ ಮಾಡಿದರು.
ಪುರುಷರ ವಿಭಾಗದ 1500 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ 5.26:78 ನಿಮಿಷದಲ್ಲಿ ಶಿಕ್ಷಣ ಇಲಾಖೆಯ ತಿಪ್ಪೇಸ್ವಾಮಿ ಮೊದಲು ಗುರಿ ಮುಟ್ಟಿದರೆ, 45 ವರ್ಷ ಮೇಲ್ಪಟ್ಟವರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅದೇ ಇಲಾಖೆಯ ಸಕಲೇಶ್ವರ್ 0.14:75 ಸೆಕೆಂಡ್ಗಳಲ್ಲಿ ಮೊದಲು ಗುರಿ ಮುಟ್ಟಿದರು.
ಮಹಿಳೆಯರ 40 ವರ್ಷದ ಒಳಗಿನವರ ವಿಭಾಗದ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಆರೋಗ್ಯ ಇಲಾಖೆಯ ಉಮಾಮಹೇಶ್ವರಿ 4.46;94 ನಿಮಿಷದಲ್ಲಿ ಗುರಿ ಮುಟ್ಟಿ ವಿಜಯಿಯಾದರು.
40 ವರ್ಷ ಮೇಲ್ಪಟ್ಟವರ 800 ಮೀಟರ್ಸ್ ಓಟದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನಿತ್ರಾಣಗೊಂಡರೂ ಪ್ರಯತ್ನ ಬಿಡದೆ ಶಿಕ್ಷಣ ಇಲಾಖೆಯ ವನಜಾಕ್ಷಿ ಮೊದಲು ಗುರಿಮುಟ್ಟಿ ಪ್ರಶಂಸೆಗೆ ಪಾತ್ರರಾದರು.
45 ವರ್ಷದ ಒಳಗಿನವರ ಪುರುಷರ 100 ಮೀಟರ್ಸ್ ಓಟದ ಸ್ಪರ್ಧೆ: ಮಂಜಪ್ಪ (ಪ್ರ), ಕೆ.ರಾಘವೇಂದ್ರ (ದ್ವಿ), ವಿ.ರಾಘವೇಂದ್ರ (ತೃ) , 400 ಮೀಟರ್ಸ್: ಟಿ.ಸ್ವಾಮಿ (ಪ್ರ), ಡಿ.ಕೆ.ಎರ್ರಪ್ಪ (ದ್ವಿ), ರಾಮರಾಜು (ತೃ), 800 ಮೀಟರ್ಸ್: ಸೈಯದ್ ಅಕ್ರಂ (ಪ್ರ), ಟಿ.ಜಿ.ಮಂಜುನಾಥ್ (ದ್ವಿ), ಕೆ.ರಾಘವೇಂದ್ರ (ತೃ). ಕ್ರೀಡಾ ಸಂಕೀರ್ಣದಲ್ಲಿ ಕೇರಂ, ಚೆಸ್, ಈಜು, ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಉದ್ಘಾಟನೆ: ಗ್ರಾಮೀಣ ಶಾಸಕ ಎನ್.ವೈ.ಗೋಪಾಲಕೃಷ್ಣ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಭಾಗ್ಯ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಟಿ.ಮಲ್ಲೇಶ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಹಮತ್ ಉಲ್ಲಾ ಇದ್ದರು.
ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರೊಂದಿಗೆ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಕೆ.ಎನ್.ರಾಮಸ್ವಾಮಿ, ಹಾಕಿ ತರಬೇತುದಾರ ಜಾಕಿರ್, ಕ್ರೀಡಾ ಸಂಕೀರ್ಣದ ವ್ಯವಸ್ಥಾಪಕ ಕೆ.ಪ್ರದೀಪ್ಕುಮಾರ್ ನಿರ್ವಹಿಸಿದರು. ಕ್ರೀಡಾಕೂಟ ಶುಕ್ರವಾರ ಮುಕ್ತಾಯವಾಗಲಿದೆ.
ಬರಿಗಾಲಲ್ಲೇ ಓಟ
ಸ್ಪರ್ಧೆಯಲ್ಲಿ ಪಾಲ್ಗೊಂಡ ಬಹುತೇಕ ನೌಕರರು ಓಟಕ್ಕೆ ಬೇಕಾದ ಶೂ ಧರಿಸದೆ ಬರಿಗಾಲಲ್ಲಿ ಓಡಿದ್ದು ಗಮನ ಸೆಳೆಯಿತು. ಕೆಲವರು ದಿನನಿತ್ಯ ಧರಿಸುವ ಅಂಗಿ–ಪ್ಯಾಂಟಿನಲ್ಲೇ ಓಡಿದರು. ಮಹಿಳೆಯರು ಶೂ ಬದಲಿಗೆ ಸಾಕ್ಸ್ ಮಾತ್ರ ಧರಿಸಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.