ಮಂಗಳೂರು: ಮತೀಯ ದ್ವೇಷ ಬಿತ್ತುವ ಮತ್ತು ಮಹಿಳೆಯ ಘನತೆಗೆ ಕುಂದು ತರುವಂತಹ ಸಂದೇಶಗಳನ್ನು ವಾಟ್ಸ್ ಆ್ಯಪ್ ಗುಂಪಿನಲ್ಲಿ ರವಾನೆ ಮಾಡಿದ ಆರೋಪದ ಮೇಲೆ ವಾಟ್ಸ್ ಆ್ಯಪ್ ಗುಂಪೊಂದರ ಅಡ್ಮಿನ್ ಸೇರಿದಂತೆ ಇಬ್ಬರನ್ನನು ಬಂಟ್ವಾಳ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಚಾಲಕ ಬಾಲಕೃಷ್ಣ ಪೂಜಾರಿ ಮತ್ತು ಸತೀಶ್ ಬಂಧಿತ ಆರೋಪಿಗಳು. ಇಬ್ಬರೂ ಬಂಟ್ವಾಳ ನಿವಾಸಿಗಳು. ಸತೀಶ್ ವಾಟ್ಸ್ ಆ್ಯಪ್ ಗುಂಪೊಂದರ ಅಡ್ಮಿನ್ ಆಗಿದ್ದಾನೆ ಎಂದು ದಕ್ಷಿಣ ಕನ್ನಡ ಎಸ್ ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಗಳು ಧರ್ಮದ ನೆಲೆಯಲ್ಲಿ ದ್ವೇಷ ಹುಟ್ಟಿಸುವ ಮತ್ತು ಮಹಿಳೆಯೊಬ್ಬರ ಚಾರಿತ್ರ್ಯಹನನ ಮಾಡುವಂತಹ ಸಂದೇಶಗಳನ್ನು ರವಾನಿಸಿದ್ದರು. ಅವರ ವಿರುದ್ಧ ಮತೀಯ ದ್ವೇಷ ಸೃಷ್ಟಿಸಲು ಯತ್ನ, ಸಮಾಜದಲ್ಲಿ ಶಾಂತಿ ಕದಡಲು ಯತ್ನ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.