ಮುಂಡರಗಿ: ‘ಆರ್.ಎಸ್.ಎಸ್, ಬಿಜೆಪಿ ಹಾಗೂ ಭಜರಂಗ ದಳದವರು ಉಗ್ರಗಾಮಿಗಳೆಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಸಮುದಾಯವನ್ನು ಅವಮಾನಿಸಿದ್ದಾರೆ’ ಎಂದು ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ದೇವಪ್ಪ ಕಂಬಳಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತಮ್ಮ ಬೇಜವಬ್ದಾರಿಯುತ ಹೇಳಿಕೆಯನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಉಗ್ರ ಚಟುವಟಿಕೆಗಳಲ್ಲಿ ಯಾರು ಭಾಗವಹಿಸಿದ್ದಾರೆ ಎಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಪ್ತಚರ ಇಲಾಖೆಯಿಂದ ಮಾಹಿತಿ ತರಿಸಿಕೊಳ್ಳಲಿ. ಜವಾಬ್ದಾರಿಯುತ ಹುದ್ದೆಯಲ್ಲಿ ಇರುವ ಸಿದ್ದರಾಮಯ್ಯ ಒಂದು ಸಮುದಾಯವನ್ನು ಓಲೈಸುವ ಭರಾಟೆಯಲ್ಲಿ ಈ ರೀತಿ ತಪ್ಪು ಸಂದೇಶ ನೀಡಿರುವುದು ತಪ್ಪು’ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಿವನಗೌಡ ಗೌಡರ, ಮುಂಡರಗಿ ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ವಿಜಯಕುಮಾರ ರಾಟಿ, ದೇವಪ್ಪ ಇಟಗಿ ಎಚ್.ಎಂ.ಗಾಣಿಗೇರ, ಟಿ.ಬಿ.ದಂಡಿನ, ನಾಗರಾಜ ಮುರಡಿ, ಮಹಾಂತೇಶ ಕೊರಟಗೇರಿ, ಕೃಷ್ಣ ಗಾರವಾಡ, ಮಲ್ಲೇಶ ಉಳ್ಳಾಗಡ್ಡಿ, ಮಹಾಂತೇಶ ಬಳ್ಳಾರಿ ಇದ್ದರು.