ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿ ಕೋಟು ತೊಟ್ಟು ಬರುತ್ತೇನೆ: ಶೆಟ್ಟರ್‌

Last Updated 12 ಜನವರಿ 2018, 10:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜನರ ವಿಶ್ವಾಸ ಇರುವವರೆಗೆ ನಾನು ರಾಜಕಾರಣದಲ್ಲಿ ಇರುತ್ತೇನೆ. ಬಳಿಕ ಮನೆಯಲ್ಲಿ ಇಟ್ಟಿರುವ ಕರಿಕೋಟು ತೊಟ್ಟು ಕೋರ್ಟ್‌ಗೆ ಬರುತ್ತೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು. ನಗರದ ಮರಾಠ ಮಂಡಳದಲ್ಲಿ ಗುರುವಾರ ವಕೀಲರ ಬಳಗ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘15 ವರ್ಷಗಳ ವಕೀಲಿ ವೃತ್ತಿಯ ಅನುಭವದಿಂದಾಗಿ ನಾನು ಐದು ಬಾರಿ ಶಾಸಕ, ವಿರೋಧಪಕ್ಷದ ನಾಯಕ, ಸಚಿವ, ಸ್ಪೀಕರ್‌, ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

‘ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವನು ನಾನು. 1994ರಲ್ಲಿ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ವಕೀಲ ಸ್ನೇಹಿತರೇ ನನಗೆ ಬೆಂಬಲವಾಗಿ ನಿಂತ ಪರಿಣಾಮ ಸುಲಭವಾಗಿ ಜಯ ಗಳಿಸಲು ಸಾಧ್ಯವಾಯಿತು’ ಎಂದರು.

‘ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಅಲ್ಲಿ ವಕೀಲರೇ ಪ್ರಮುಖ ಸ್ಥಾನದಲ್ಲಿರುತ್ತಾರೆ. ಉದಾಹರಣೆಗೆ ನಾನು ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜೆ.ಎಚ್‌.ಪಟೇಲ್‌, ಎಸ್‌.ಆರ್‌.ಬೊಮ್ಮಾಯಿ ಅವರೆಲ್ಲರೂ ವಕೀಲಿ ವೃತ್ತಿಯಿಂದ ಬಂದವರು’ ಎಂದು ಹೇಳಿದರು.

‘ನ್ಯಾಯಾಲಯ ಎಂಬುದು ಒಂದು ಪುಟ್ಟ ಪ್ರಪಂಚ ಇದ್ದಹಾಗೆ. ಇಲ್ಲಿಗೆ ಬಡವರು, ಶ್ರೀಮಂತರು ಸೇರಿದಂತೆ ಎಲ್ಲ ತರದವರು ಬರುತ್ತಾರೆ. ಇಲ್ಲಿ ಸಿಗುವ ಅನುಭವ ದೊಡ್ಡದು’ ಎಂದರು.

‘ಬಿಆರ್‌ಟಿಎಸ್‌, ಯುಜಿಡಿ, 24X7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕಾಗಿ ರಸ್ತೆಗಳನ್ನು ಅಗೆಯಲಾಗುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ ನಿಜ. ಮುಂದಿನ ಒಂದು ವರ್ಷದೊಳಗೆ ಅವಳಿ ನಗರದ ಚಿತ್ರಣ ಸಂಪೂರ್ಣ ಬದಲಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ಪಣಜಿ, ಹೈದರಾಬಾದ್‌, ತಿರುಪತಿ, ದೆಹಲಿ, ಅಹಮದಾಬಾದ್ ಸೇರಿದಂತೆ ಏಳೆಂಟು ನಗರಗಳಿಗೆ ವಿಮಾನಯಾನ ಆರಂಭಿಸಲು ಖಾಸಗಿ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ’ ಎಂದು ಹೇಳಿದರು.

ಹಿರಿಯ ವಕೀಲ ಎಸ್‌.ಎಸ್‌.ಗಂಜಿ, ಎ.ವಿ.ಬಳಿಗೇರ, ಎಂ.ಎಸ್‌.ಬಾಣದ, ಅಶೋಕ ವಿ.ಅಣವೇಕರ, ಬಳಗದ ಅಧ್ಯಕ್ಷ ಶಿವಾನಂದ ಎಂ.ವಡ್ಡಟ್ಟಿ, ಕಾರ್ಯದರ್ಶಿ ಗುರು ಎಫ್‌.ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

* * 

ನನ್ನ ರಾಜಕೀಯ ಬೆಳವಣಿಗೆಗೆ ವಕೀಲರೇ ಸ್ಫೂರ್ತಿ. ಮುಂಬರುವ ಚುನಾವಣೆಯಲ್ಲಿ ವಕೀಲ ಮಿತ್ರರು ನನ್ನ ಜೊತೆಗಿರಬೇಕು
ಜಗದೀಶ ಶೆಟ್ಟರ್‌
ವಿಧಾನಸಭೆ ವಿರೋಧಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT