ಬೆಂಗಳೂರು: ಭಾರತೀಯ ಗೋ ಪರಿವಾರ 48 ದಿನಗಳು ರಾಜ್ಯದಲ್ಲಿ ಕೈಗೊಂಡ ಅಭಯ ಗೋಯಾತ್ರೆಯ ಸಮಾರೋಪ ‘ಅಭಯ ಮಂಗಲ’ ಸಮಾರಂಭ ಇದೇ 21ರಂದು ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆಯಲಿದೆ.
ವಿನಾಶದ ಅಂಚಿನಲ್ಲಿರುವ 'ಮಲೆನಾಡು ಗಿಡ್ಡ' ತಳಿಯನ್ನು ಮಠ ದತ್ತು ಪಡೆಯಲಿದ್ದು, ಅದರ ಸಂರಕ್ಷಣೆ ಮತ್ತು ಸಂವರ್ಧನೆ ಮಾಡಲಿದೆ. ನೂರೆಂಟು ಸಂತರು ಹಾಗೂ ಸಹಸ್ರ ಭಕ್ತರು ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ರಕ್ತದಲ್ಲಿ ಹಕ್ಕೊತ್ತಾಯ ಪತ್ರ ಬರೆಯಲಿದ್ದಾರೆ.
‘ಡಿಸೆಂಬರ್ 3ರಿಂದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿದ ಅಭಯ ಗೋಯಾತ್ರೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಈ ಜನಾಂದೋಲನ ಮನೆ- ಮನಗಳಿಗೆ ತಲುಪಿಸಲು ಅಭಯ ಮಂಗಲ ಮಹತ್ವದ ಪಾತ್ರ ವಹಿಸಲಿದೆ’ ಎಂದು ಮಠ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಜ್ಞರು, ಗಣ್ಯರು, ಗೋ ಸಂಶೋಧಕರು, ಗವ್ಯ ಚಿಕಿತ್ಸಾ ತಜ್ಞರು, ಗೋಪರ ಹೋರಾಟಗಾರರು ಭಾಗವಹಿಸುವರು.