ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗಾಜಲಬಾವಿ ಗ್ರಾಮದ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಸುಣ್ಣಕುಪ್ಪಂ ಗ್ರಾಮದ ಭಾಸ್ಕರ್ (35), ಪಾರ್ವತಮ್ಮ (38) ಮತ್ತು ಗೌರಮ್ಮ (40) ಮೃತರು. ಘಟನೆಯಲ್ಲಿ ನಾರಾಯಣಪ್ಪ, ಶಂಕರಮ್ಮ, ಕೃಷ್ಣಮೂರ್ತಿ, ಶಂಕರಪ್ಪ ಎಂಬುವರು ಗಾಯಗೊಂಡಿದ್ದಾರೆ.
ಒಂದೇ ಕುಟುಂಬದ ಇವರೆಲ್ಲರೂ ಸರಕು ಸಾಗಣೆ ಅಟೊದಲ್ಲಿ ಮುಳಬಾಗಿಲು ಸಮೀಪದ ಖಾದ್ರಿಪುರದಲ್ಲಿನ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಗಾಯಾಳುಗಳನ್ನು ಮುಳಬಾಗಿಲು ಮತ್ತು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.