ರಾಯಚೂರು: ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಸಮಾಜದವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಉಪ್ಪಾರವಾಡಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ದೇಶ ಸ್ವಾತಂತ್ರ್ಯಗೊಳ್ಳಲು ಉಪ್ಪಾರ ಸಮಾಜದ ಪಾತ್ರ ಪ್ರಮುಖವಾಗಿದ್ದು, ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ಆದರೆ, ಸರಿಯಾದ ದಾಖಲೆ ಆಗದಿರುವುದರಿಂದ ಸಮಾಜದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ವಿವರಿಸಿದರು.
ವಡ್ಡರ ಹಾಗೂ ಉಪ್ಪಾರರ ಕಸುಬು ಒಂದೇಯಾಗಿದ್ದರೂ, ವಡ್ಡರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಉಪ್ಪಾರ ಸಮಾಜವನ್ನು ಕೈಬಿಡಲಾಗಿದೆ. ಆದ್ದರಿಂದ ಉಪ್ಪಾರ ಸಮಾಜ ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ ಎಂದರು.
ಕಾರವಾರ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಟಜಾತಿಗೆ ಸೇರಿಸಲಾಗಿದೆ. ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಜರುಗಿಸಲಾಗಿದೆ. ಅನುಮೋದನೆ ಪಡೆಯಲು ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ತಾವು ಕೂಡ ಮೀಸಲಾತಿ ಪಟ್ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದು, ಇದುವರೆಗೆ ಈಡೇರಿಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಘಟಕ ಅಧ್ಯಕ್ಷ ಆದೋನಿ ಅಮರೇಶ, ಕೆ.ವೆಂಕಟೇಶ, ವರಮುನೀಂದ್ರ, ಪಾಗುಂಟಪ್ಪ, ಮಾರೆಪ್ಪ, ಸೂಗಪ್ಪ, ಚಂದ್ರಶೇಖರ, ವೆಂಕೋಬ ಸರ್ಜಾಪುರ, ಚನ್ನಬಸವ, ಸಿದ್ದಲಿಂಗಪ್ಪ, ಸುರೇಖಾ ಇದ್ದರು.