ಮುಂಡರಗಿ: ‘ಇಂದಿನ ಯುವಕರ ಪಾಲಿಗೆ ಗಡಿಯಲ್ಲಿ ದೇಶ ಕಾಯುವ ಸೈನಿಕರಿಗಿಂತ ಕ್ರಿಕೆಟ್ ಆಟದಲ್ಲಿ ಬೌಂಡ್ರಿ ಹೊಡೆಯುವ ಆಟಗಾರರೇ ಹಿರೋಗಳಾಗುತ್ತಿದ್ದಾರೆ. ಹಲವು ಸಂಕಷ್ಟಗಳ ನಡುವೆ ದೇಶ ಕಾಯುವ ಸೈನಿಕರೇ ನಮ್ಮ ನಿಜವಾದ ನಾಯಕ, ನಾವೆಲ್ಲ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಮಣಕವಾಡದ ಅನ್ನದಾನೀಶ್ವರ ದೇವಮಂದಿರಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಿಂಗಟಾಲೂರ ಗ್ರಾಮದ ವಿವೇಕ ಭಾರತಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಳಗಳು ಗುರುವಾರ ರಾತ್ರಿ ಗ್ರಾಮದದಲ್ಲಿ ಏರ್ಪಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ನಮ್ಮ ದೇಶ ದೇವರಿಗಿಂತ ಪವಿತ್ರವಾಗಿದ್ದು, ದೇಶ ಸೇವೆಯಲ್ಲಿಯೇ ನಾವು ಈಶನನ್ನು ಕಾಣಬೇಕು. ದೇಹ ವ್ಯಾಮೋಹವನ್ನು ಬಿಟ್ಟು ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ದೇಶ ಉದ್ಧಾರವಾಗುತ್ತದೆ. ಯುವಕರು ಮನಸ್ಸು ಮಾಡಿದರೆ ಒಂದು ದೇಶವನ್ನು ತುಂಬಾ ಕಡಿಮೆ ಅವಧಿಯಲ್ಲಿ ಸರಿ ದಾರಿಗೆ ತರಬಹುದಾಗಿದೆ’ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಉತ್ತರ ಭಾಗದ ಪ್ರಾಂತ ಸಹಬೌದ್ಧಿಕ ಪ್ರಮುಖ ಡಾ.ರವೀಂದ್ರ, ಯೋಧ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಕೊಪ್ಪದ ಮಾತನಾಡಿದರು.
ಡಾ.ಲೋಕೇಶ ಟೇಕಲ್, ಬಾಲ ಪ್ರತಿಭೆ ಮಹಾಗಣಪತಿ ಬಿಳಿಮಗ್ಗದ, ಬಿಇಒ ಶಂಕರ ಹಳ್ಳಿಗುಡಿ, ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಗಳಿಸಿದ ಸುವರ್ಣಾ ಶೆಟ್ಟರ, ಅಶೋಕ ಈಟಿ ಹಾಗೂ ನಜೀರ್ ನದಾಫ ಅವರನ್ನು ಸನ್ಮಾನಿಸಲಾಯಿತು.