ಬೆಂಗಳೂರು: ಹಣದಾಸೆಗೆ ಪೋಷಕರನ್ನೇ ಹತ್ಯೆ ಮಾಡುವ ಮಕ್ಕಳಿದ್ದಾರೆ. ಹೀಗಾಗಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹಮದ್ ಹೇಳಿದರು.
ಕೆ.ಆರ್.ಪುರ ಸಮೀಪದ ದೇವಸಂದ್ರದ ಅಮರ ಜ್ಯೋತಿ ಶಾಲೆಯ 34ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಹಣದಾಸೆಗಾಗಿ ಅಜ್ಜಿ–ತಾತನನ್ನೇ ಕೊಂದಿದ್ದ. ಮಕ್ಕಳ ಬೆಳವಣಿಗೆಯ ಬಗೆಯನ್ನು ಇಂತಹ ಘಟನೆಗಳು ಸಾಕ್ಷೀಕರಿಸುತ್ತವೆ. ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಾದಿ ತಪ್ಪುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಸಾವಿರಾರು ನಾಗರಿಕರಿಗೆ ಒಂದು ಪೊಲೀಸ್ ಠಾಣೆ ಇದೆ. ಎಲ್ಲವನ್ನೂ ನಿಯಂತ್ರಿಸಲು ಪೊಲೀಸರಿಂದ ಸಾಧ್ಯವಾಗುವುದಿಲ್ಲ. ನಾಗರಿಕರು ಸಹ ಪೊಲೀಸರ ಜತೆ ಕೈ ಜೋಡಿಸಬೇಕು. ಇದರಿಂದ ಅಪರಾಧಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ಶಾಸಕ ಬಿ.ಎ.ಬಸವರಾಜ್, ‘ಪ್ರತಿ ವಿದ್ಯಾರ್ಥಿಯು ತನ್ನ ಮಗುವೆಂಬ ಭಾವನೆ ಶಿಕ್ಷಕರಿಗೆ ಇರಬೇಕು. ಅವರ ಜ್ಞಾನ ವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾವರಿಗೆ ಬಹುಮಾನ ವಿತರಿಸಲಾಯಿತು.