ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಪಕ್ಷದ ಕಾರ್ಯ ಕರ್ತರು ಹಾಗೂ ಮುಖಂಡರು ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಎಚ್.ಡಿ.ದೇವೇಗೌಡ ಅವರ ಪುತ್ರ ಡಾ.ಎಚ್.ಡಿ.ರಮೇಶ್ ಸಲಹೆ ನೀಡಿದರು. ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಶನಿವಾರ ನಡೆದ ‘ಕುಮಾರ ಪರ್ವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲ ಬಾರಿಗೆ ರಾಜಕೀಯ ವಿಷಯವಾಗಿ ವೇದಿಕೆಯ ಮೇಲೆ ಮಾತನಾಡುತ್ತಿರುವುದು ಎಂದು ಹೇಳಿದ ಅವರು, ‘ರಾಜಕೀ ಯವಾಗಿ ಅಧಿಕಾರದಲ್ಲಿ ಗುರುತಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಆದರೂ ಅಪ್ಪ ಹಾಗು ನನ್ನ ಅಣ್ಣಂದಿರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರ ಮಾತಿನ ಅಣತಿ ಯಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ’ ಎಂದು ಸ್ಪಷ್ಟ ಪಡಿಸಿದರು.
‘ಜೆಡಿಎಸ್ ಜಿಲ್ಲೆಯಲ್ಲಿ ಬಲಿಷ್ಠ ವಾಗಿದೆ. ವಿಧಾನ ಸಭಾ ಕ್ಷೇತ್ರದ ಟಿಕೆಟ್ ಪಡೆದುಕೊಳ್ಳುವ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಹೀಗಿರುವಾಗ ಪಕ್ಷದ ವರಿಷ್ಠರು ಗುರುತಿಸುವ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಹಾಗಾಗಿ ಗೊಂದಲ ಬೇಡ. ಮೊದಲು ಪಕ್ಷ ಸಂಘಟನೆಯಲ್ಲಿ ತೊಡಗಿ’ ಎಂದು ಕರೆ ನೀಡಿದರು.
‘ಈಗಾಗಲೇ ವಿಧಾನ ಸಭಾ ಕ್ಷೇತ್ರದ ಟಿಕೆಟ್ಗಾಗಿ ಕೆಲವು ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಅವರೆಲ್ಲರೂ ಪಕ್ಷಕ್ಕಾಗಿ ದುಡಿದವರೇ ಆಗಿದ್ದಾರೆ. ಆದರೂ ಪಕ್ಷದ ಹಿತಕ್ಕಾಗಿ ದುಡಿಯುವ ಮನೋಭಾವ ಮುಖ್ಯವಾಗಬೇಕು. ಯಾರಿಗೆ ಟಿಕೆಟ್ ಸಿಕ್ಕರೂ ಬೇಸರಪಟ್ಟುಕೊಳ್ಳದೇ ಪಕ್ಷದ ಗೆಲುವಿಗಾಗಿ ದುಡಿಯಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ‘ಶಾಸಕ ಚಲುವರಾಯಸ್ವಾಮಿ ಹಣದ ಆಮಿಷ ಒಡ್ಡಿದರೂ ಗೆಲ್ಲಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಎಲ್ಲಾ ಭಾಗ್ಯ ಕೊಟ್ಟರೂ, ಕಾಂಗ್ರೆಸ್ ಪಕ್ಷದಿಂದ ಸಾಧನಾ ಸಮಾವೇಶಗಳು ನಡೆದರೂ, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಅಹಿಂದ ಕಾರ್ಯಕರ್ತರು ಇದ್ದರೆ ಸಾಕು ಯಾವ ರೈತರೂ ಬೇಕಿಲ್ಲ ಎಂದು ಹೇಳಿದ್ದರು. ಸರ್ಕಾರದಿಂದ ಹಲವು ಯೋಜನೆಗಳನ್ನು ನೀಡಿದರೂ ಅದು ರೈತರಿಗೆ, ಬಡವರಿಗೆ ಸೇರಿದಂತೆ ಫಲಾನುಭವಿಗಳಿಗೆ ತಲುಪಿಲ್ಲ. ಇದಕ್ಕೆಲ್ಲ ಪರಿಹಾರ ಸಿಗುವುದು ಜೆಡಿಎಸ್ ಪಕ್ಷದಿಂದ ಮಾತ್’ ಎಂದರು.
ಮಾಜಿ ಶಾಸಕ ಸುರೇಶ್ಗೌಡ ಮಾತನಾಡಿ, ‘ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು. ಯಾವುದೇ ರಾಷ್ಟ್ರೀಯ ಪಕ್ಷಗಳು ಇಲ್ಲಿಯವರೆಗೆ ರೈತರ ಸಾಲ ಮನ್ನಾ ಮಾಡುವ ಸಾಹಸಕ್ಕೆ ಕೈಹಾಕಿಲ್’ ಎಂದರು.
‘ಬಣ್ಣ ಹಚ್ಚಿ ನಟನೆ ಮಾಡುವವರು ರೈತರ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂಬುದು ಈಗಾಗಲೇ ಜನರಿಗೆ ಗೊತ್ತಾಗಿದೆ. ಆದರೂ ರಾಜಕೀಯವಾಗಿ ಎಲ್ಲಾ ಅಧಿಕಾರವನ್ನು ಅನುಭವಿಸುತ್ತ ಕೇವಲ ನೆಪ ಮಾತ್ರಕ್ಕೆ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಗುರಿ ಎಂದು ಸುಳ್ಳು ಹೇಳಿಕೊಂಡು ಮತ ಕೇಳಲು ಬರುತ್ತಿರುವುದು ದುರಂತ’ ಎಂದು ದೂರಿದರು.
ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಜಿ.ಬಿ.ಶಿವಕುಮಾರ್, ಕೆ.ಅನ್ನದಾನಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬೀರಪ್ಪ, ಮುಖಂಡರಾದ ಸಿದ್ದರಾಮೇಗೌಡ, ಡಾ.ಕೃಷ್ಣ, ಅಂಬುಜಮ್ಮ, ವಿನಯ್, ಯೋಗೇಶ್, ಸಂತೋಷ್ ಇದ್ದರು.
ಕರಪತ್ರ ಹಂಚಿಕೆ
‘ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್ ಅವರು ಡಿ.ಗ್ರೂಪ್ ನೌಕರರ ನೇಮಕಾತಿಯಲ್ಲಿ ಅಕ್ರಮ ನಡೆಸಿ ಭ್ರಷ್ಟಾಚಾರ ಮಾಡಿದ್ದಾರೆ’ ಎಂಬ ಕರಪತ್ರವನ್ನು ಕುಮಾರ ಪರ್ವ ಸಮಾವೇಶದಲ್ಲಿ ಹಂಚಲಾಗುತ್ತಿತ್ತು.
‘ಇವರು ನಾಗಮಂಗಲದ ಶಾಸಕ ಚಲುವರಾಯಸ್ವಾಮಿ ಅವರ ಅಣ್ಣನ ಮಗನಾಗಿದ್ದು, 15 ವರ್ಷಗಳಿಂದ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತ ಅಕ್ರಮ ಎಸಗುತ್ತಿದ್ದಾರೆ’ ಎಂಬ ಆರೋಪ ಕರಪತ್ರದಲ್ಲಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.