ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಜನಪದ ಸಂಸ್ಕೃತಿ ಸಂಕ್ರಮಣ

Last Updated 14 ಜನವರಿ 2018, 6:54 IST
ಅಕ್ಷರ ಗಾತ್ರ

ಧಾರವಾಡ: ಮಕರ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಲು ಜಾನಪದ ಸಂಶೋಧನಾ ಕೇಂದ್ರ`ಸಂಕ್ರಾಂತಿ ಸಂಭ್ರಮ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿತ್ತು.

ನಗರದ ವಿದ್ಯಾಗಿರಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸುವ ಮೂಲಕ ಮರೆತು ಹೋಗಿರುವ ಜನಪದ ಸಂಸ್ಕೃತಿಯನ್ನು ಮರಳಿ ನೆನಪು ತರುವ ಪ್ರಯತ್ನ ಮಾಡಲಾಯಿತು.

ಒಂದು ಕಡೆ ಜಾನಪದ ಗೀತೆಗಳ ಮಾಧುರ್ಯ ಇನ್ನೊಂದೆಡೆ ಸಾಂಪ್ರಾದಾಯಿಕ ನೃತ್ಯ, ಪೂಜೆಯಲ್ಲಿ ತೊಡಗಿದ್ದ ಮಹಿಳೆಯರ ಸಂಭ್ರಮ.  ನಗರದ ಹಲವಾರು ಮಹಿಳಾ ಸಂಘಗಳ ಸದಸ್ಯರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಜಾನಪದ ಗೀತೆಗಳೊಂದಿಗೆ ಸಂಭ್ರಮ ಆರಂಭವಾಯಿತು. ಮರೆತು ಹೋಗಿದ್ದ ಅದೆಷ್ಟೋ ಜಾನಪದ ಗೀತೆಗಳಿಗೆ ಮಹಿಳೆಯರು ದನಿಯಾದರು. ಮೈತುಂಬಾ ಚಿನ್ನದ ಆಭರಣ ಧರಿಸಿ, ತಲೆ ಮೇಲೆ ಬುತ್ತಿ ಗಂಟು ಹೊತ್ತುಕೊಂಡು ವನಿತೆಯರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ರಂಗಭೂಮಿ ಹಾಗೂ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಈ ಕಾರ್ಯಕ್ರಮ ಆಯೋಜಿಸಿದ್ದರು.

ಸಂಕ್ರಮಣ ಹಬ್ಬವೆಂದರೆ ಬರೀ ಅಡುಗೆ ಮಾಡಿ ಊಟ ಮಾಡುವುದಲ್ಲ. ಪರಸ್ಪರ ಪ್ರೀತಿ ಹಂಚಿಕೆ, ಸಂಬಂಧ ಗಟ್ಟಿಗೊಳಿಸುವಿಕೆ ಸೇರಿದಂತೆ ಜೀವನದೊಂದಿಗೆ ಹೊಂದಿಕೊಂಡಿರುವ ಹಬ್ಬಗಳ ಮಹತ್ವವೇನು ಎಂಬುದನ್ನು ಈ ಕಾರ್ಯಕ್ರಮ ಮನವರಿಕೆ ಮಾಡಿಕೊಟ್ಟಿತು. ಜಾನಪದ ಸಂಶೋಧನ ಕೇಂದ್ರ ಹಾಗೂ ಅಕ್ಕನಬಳಗದಿಂದ ನಡೆದ ಈ ವಿಶಿಷ್ಠ ಕಾರ್ಯಕ್ರಮದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ, ಆಭರಣಗಳನ್ನು ತೊಟ್ಟು ಪಾಲ್ಗೊಂಡಿದ್ದರು.

ಬೆಳಿಗ್ಗೆ ಆರಂಭವಾದ ಈ ವಿಶಿಷ್ಟ ಹಬ್ಬದ ಆಚರಣೆ ಸಂಜೆವರೆಗೂ ಸಾಗಿತು. ಮಧ್ಯಾಹ್ನ ಹಬ್ಬದ ಊಟ ಸವಿದು ಇಡೀ ದಿನ ಜನಪದ ಹಾಡುಗಳನ್ನು ಹಾಡಿ, ನೃತ್ಯ ಮಾಡಿ ಹಬ್ಬ ಆಚರಣೆಗೆ ಕಳೆ ತಂದರು. ಕಾರ್ಯಕ್ರಮದಲ್ಲಿ ಮಹಾದೇವ ಹೊರಟ್ಟಿ, ಪ್ರೇಮಾ ಹೊರಟ್ಟಿ, ಮಂಜುನಾಥ ಮೋರೆ, ಮಲ್ಲಪ್ಪ ಹೊಂಗಲ, ಪುಷ್ಕಾ ಹಾಲಭಾವಿ, ಡಾ.ಪ್ರಭಾ ನೀರಲಗಿ, ವಿದ್ಯಾ ಜಮಖಂಡಿ, ಇಸಬೆಲ್ಲಾ ಝೇವಿಯರ್, ಲೀಲಾವತಿ ಕಳಸಪ್ಪನವರ, ಆಶಾ ಸೈಯದ್, ಆರತಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT