ಶಿವಮೊಗ್ಗ: ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ. ಅದನ್ನು ಮತ್ತಷ್ಟು ಬೆಳೆಸಬೇಕಾದದು ಎಲ್ಲರ ಜವಾಬ್ದಾರಿ ಎಂದು ಬಾಲ ಸಾಹಿತಿ ವೈಷ್ಣವಿ ಹೇಳಿದರು. ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹತ್ತನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಭಾಷೆಯನ್ನು ಯಾರು ಕಲಿಯುತ್ತಾರೋ ಅವರು ಇತರೆ ಭಾಷೆಗಳನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆಂಗ್ಲಭಾಷೆಯ ವ್ಯಾಮೋಹ ಅತಿಯಾಗಿರುವುದರಿಂದ ಕನ್ನಡ ಭಾಷೆ ಮಾತ್ರವಲ್ಲ, ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಕಲಿಯುತ್ತಿರುವವರಲ್ಲಿ ಆತಂಕ ಮನೆ ಮಾಡಿದೆ ಎಂದರು.
ಭಾಷೆಯು ಜ್ಞಾನದ ವಾಹಿನಿಯೇ ಹೊರತು ಭಾಷೆಯೇ ಜ್ಞಾನ ಅಲ್ಲ ಎಂದು ಅರ್ಥಮಾಡಿಕೊಂಡು ನಮ್ಮ ಮಾತೃಭಾಷೆಯನ್ನು ಉಳಿಸುವಲ್ಲಿ ಹೆಜ್ಜೆ ಹಾಕಬೇಕು. ನಾವು ಸಾಹಿತ್ಯದ ಬಗ್ಗೆ ಚಿಂತಿಸಬೇಕು ಎಂದರು.
ಸಮ್ಮೇಳನಾಧ್ಯಕ್ಷ ವಿದ್ಯಾರ್ಥಿ ಪೃಥ್ವಿ ಎಸ್. ಸಾಗರ್ ಮಾತನಾಡಿ, ‘ಶಿಕ್ಷಣ ಬದುಕನ್ನು ರೂಪಿಸುವಂತಾಗಬೇಕು, ಸಾಹಿತ್ಯವು ಸಂಸ್ಕಾರವನ್ನು ನೀಡಿದಾಗ ಹೃದಯ ಸಹೃದಯವಾಗುತ್ತದೆ. ಮಕ್ಕಳಿಗೆ ಮಾರ್ಗದರ್ಶನವಾಗುವಂತಹ ರೀತಿಯಲ್ಲಿ ಹಿರಿಯರು ಇರಬೇಕಾಗಿದೆ. ಶಿಕ್ಷಣ ಇಲ್ಲದಿದ್ದರೆ ಮನುಷ್ಯನ ಜೀವನ ವ್ಯರ್ಥವಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ಪ್ರತಿಯೊಬ್ಬ ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಪೋದಾರ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಡಾ.ಪಿ.ಎಸ್. ಶಿವಾನಂದ, ಡಾ. ಪ್ರೇಮ್ ಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಹುಚ್ಚರಾಯಪ್ಪ, ಕೆಸವಿನಮನೆ ರತ್ನಾಕರ, ಮಂಜುನಾಥ ಕಾಮತ್, ಉಮೇಶ್ ಹಿರೇನೆಲ್ಲೂರು, ವಿ.ಟಿ.ಸ್ವಾಮಿ, ಪಾಪಯ್ಯ ಉಪಸ್ಥಿತರಿದ್ದರು.