ಸಿಂದಗಿ: ಪ್ರಸ್ತುತ ಸಾಲಿನ ಲೆಕ್ಕಶೀರ್ಷಿಕೆ 5054 ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಉಪಯೋಜನೆಯಡಿ ಎಸ್ಸಿಎಸ್ಪಿ ಅನುದಾನದಲ್ಲಿ ತಾಲ್ಲೂಕಿನ ಎಂಟು ಗ್ರಾಮಗಳಲ್ಲಿ ಒಟ್ಟು ₹ 2.59 ಕೋಟಿ ವೆಚ್ಚದಲ್ಲಿ ಎಸ್.ಸಿ.ಎಸ್.ಟಿ ಜನರಿಗಾಗಿ ಸಂಪರ್ಕ ರಸ್ತೆ ಸಿ.ಸಿ ರಸ್ತೆಗಳ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಈ ರಸ್ತೆ ಕಾಮಗಾರಿ ವಿಶೇಷವಾಗಿ ನಿರ್ಮಾಣಗೊಳ್ಳುತ್ತಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲ್ಲೂಕಿನ ಡಂಬಳ ಗ್ರಾಮದ ದಿವಂಗತ ಶಂಕರಗೌಡ ಪಾಟೀಲ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡ ₹ 58.61ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಕಕ್ಕಳಮೇಲಿ ಗ್ರಾಮದಲ್ಲಿ ₹ 22.42 ಲಕ್ಷ, ಗಬಸಾವಳಗಿ ಗ್ರಾಮದಲ್ಲಿ ₹ 20.35 ಲಕ್ಷ, ಹಂಚಿನಾಳ ಗ್ರಾಮದಲ್ಲಿ ₹ 29.22 ಲಕ್ಷ, ಮೋರಟಗಿ ಗ್ರಾಮದಲ್ಲಿ ₹ 25.37 ಲಕ್ಷ, ಖಾನಾಪುರ ಗ್ರಾಮದಲ್ಲಿ ₹ 64 ಲಕ್ಷ, ಬ್ರಹ್ಮದೇವನಮಡು ಗ್ರಾಮದಲ್ಲಿ ₹ 20 ಲಕ್ಷ, ಹೊನ್ನಳ್ಳಿ ಗ್ರಾಮದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆಗಳ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿವೆ. ಇನ್ನೂ ಎರಡನೆಯ ಹಂತದಲ್ಲಿ ಇದರಷ್ಟೇ ವೆಚ್ಚದಲ್ಲಿ ವಿವಿಧ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ಶೀಘ್ರದಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.
ಹೀಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಜೊತೆಗೆ ಡಾ.ಅಂಬೇಡ್ಕರ್ ಭವನ ಮತ್ತು ಡಾ.ಬಾಬು ಜಗಜೀವನರಾಂ ಭವನಗಳು ಕೂಡ ವಿವಿಧ ಗ್ರಾಮಗಳಲ್ಲಿ ಲೋಕಾರ್ಪಣೆಗೊಂಡಿವೆ ಎಂದರು.
ಸಂತೋಷ ಪಾಟೀಲ ಡಂಬಳ, ತಾಪಂ ಸದಸ್ಯ ಶ್ರೀಶೈಲ ಚಳ್ಳಗಿ, ನಾನಾಗೌಡ ಪಾಟೀಲ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಮಹಾದೇವ ರಾಠೋಡ, ಬಸವರಾಜ ಮಾರಲಬಾವಿ, ನಾಗಣ್ಣಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಶಂಕ್ರಯ್ಯ ಹಿರೇಮಠ, ಸಿದ್ದು ತಡಲಗಿ,ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನಾರಾಯಣಕರ ಇದ್ದರು.