ಕಲಬುರ್ಗಿ: ’ವೀರಶೈವ– ಲಿಂಗಾಯತ ಎರಡೂ ಒಂದೇ ಆಗಿವೆ. ಅವುಗಳನ್ನು ಬೇರ್ಡಪಡಿಸುವ ಪ್ರಯತ್ನಗಳು ವಿಫಲವಾಗಲಿವೆ’ ಎಂದು ಚಿಕ್ಕವೀರೇಶ್ವರ ಸಂಸ್ಥಾನ ಮಠದ ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಶ್ರೀನಿವಾಸ ಸರಡಗಿಯಲ್ಲಿ ಶನಿವಾರ ಚಿಕ್ಕವೀರೇಶ್ವರರ 71ನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ‘ವೀರಶೈವ ಪೀಠಗಳು, ಲಿಂಗಾಯತ ಮಠಗಳು ನಾಡಿನ ಜನತೆಗೆ ಒಳಿತು ಮಾಡುತ್ತಿವೆ. ನಿಸ್ವಾರ್ಥದಿಂದ ಸಮಾಜದ ಸೇವೆಯಲ್ಲಿ ತೊಡಗಿವೆ. ಆದರೆ, ಇಂಥ ಧಾರ್ಮಿಕ ತಾಣಗಳು ರಾಜಕೀಯದ ಕೇಂದ್ರಗಳಾಗುತ್ತಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಮಠಗಳಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವುದು ನೋವಿನ ಸಂಗತಿ. ಧರ್ಮದಲ್ಲಿ ರಾಜಕೀಯ ಬೆರೆಸಲಾಗುತ್ತಿದೆ. ವೀರಶೈವ– ಲಿಂಗಾಯತರ ಮಧ್ಯೆ ಭಿನ್ನಾಭಿಪ್ರಾಯ ಮೂಡಿರುವುದು ಸರಿಯಲ್ಲ. ಕೆಲವರು ಉದ್ದೇಶಪೂರ್ವಕಾಗಿ ಭಿನ್ನಾಭಿಪ್ರಾಯ ಮೂಡಿಸಿ ಸಮಾಜದ ಏಕತೆಗೆ ಭಂಗ ತರುತ್ತಿದ್ದಾರೆ’ ಎಂದು ಅವರು ಆಪಾದಿಸಿದರು.
‘ವೀರಶೈವ–ಲಿಂಗಾಯತರ ಆಚರಣೆ, ಪರಂಪರೆ, ಅನುಭಾವ ಎಲ್ಲವೂ ಒಂದೇ ಆಗಿವೆ. ರಾಜಕೀಯ ಹಿತಾಸಕ್ತಿ ಬಿಟ್ಟು ಧರ್ಮದ ನಿಜ ಅರ್ಥ ತಿಳಿದುಕೊಂಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ವಿಜಯಪುರ ಜಿಲ್ಲೆಯ ಮಮದಾಪುರದ ಅಭಿನವ ಮುರು ಗೇಂದ್ರ ಶಿವಯೋಗಿಗಳು, ಸರಡಗಿ ಸಂಸ್ಥಾನ ಮಠದ ವೀರೇಶ್ವರ ಶಿವಾಚಾರ್ಯರು, ಪಾಳಾದ ಗುರು ಮೂರ್ತಿ ಶಿವಾಚಾರ್ಯರು, ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ, ಎಪಿಎಂಸಿ ಅಧ್ಯಕ್ಷ ಶಾಂತ ಕುಮಾರ ಬಿರಾದಾರ, ಉದ್ಯಮಿ ನಾಗಣ್ಣಪಾಟೀಲ, ಬಸವರಾಜ ಕಮರೆಡಗಿ ಇದ್ದರು.