ನವದೆಹಲಿ: ಮದರಸಾಗಳು ಐಎಎಸ್ ಅಧಿಕಾರಿಗಳನ್ನು ಸೃಷ್ಟಿಸಿವೆಯೇ ಹೊರತು ಉಗ್ರರನ್ನಲ್ಲ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಘಯೋರುಲ್ ಹಸನ್ ರಿಜ್ವಿ ಹೇಳಿದ್ದಾರೆ.
ಈ ಮೂಲಕ, ‘ಮದರಸಾಗಳು ಉಗ್ರರನ್ನು ಸೃಷ್ಟಿಸುತ್ತಿವೆ’ ಎಂಬ ಶಿಯಾ ಮಂಡಳಿ ಮುಖ್ಯಸ್ಥ ವಸೀಂ ರಿಜ್ವಿ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
‘ಮದರಸಾಗಳನ್ನು ಭಯೋತ್ಪಾದನೆಗೆ ಹೋಲಿಕೆ ಮಾಡುವುದು ಹಾಸ್ಯಾಸ್ಪದ ಮತ್ತು ಬಾಲಿಶ ಸಂಗತಿ. ಯಾವುದೋ ಒಂದು ಅಥವಾ ಎರಡು ಘಟನೆಗಳಿಂದ ಎಲ್ಲ ಮದರಸಾಗಳನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡುವುದು ತರವಲ್ಲ’ ಎಂದು ಅವರು ತಿರುಗೇಟು ನೀಡಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಮದರಸಾಗಳಲ್ಲಿ ಓದಿದ ಮಕ್ಕಳು ಐಎಎಸ್ ಅಧಿಕಾರಿಗಳಾಗುತ್ತಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಭಯೋತ್ಪಾದಕರನ್ನು ಸೃಷ್ಟಿಸುತ್ತಿರುವ ಮದರಸಾಗಳನ್ನು ಮುಚ್ಚಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ವಸೀಂ ರಿಜ್ವಿ ಇತ್ತೀಚೆಗೆ ಪತ್ರ ಬರೆದಿದ್ದರು.