ಬೆಂಗಳೂರು: ಅನಿಯಮಿತ ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡವೇ ಮಧುಮೇಹ ಸಮಸ್ಯೆಗೆ ಕಾರಣ. ಒತ್ತಡವಿಲ್ಲದ ಜೀವನಕ್ಕಾಗಿ ಯೋಗಾಭ್ಯಾಸ ಬಹಳ ಮುಖ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ವಿ.ಸುದೇಶ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಾಗಿ ಆಯೋಜಿಸಿದ್ದ ‘ಮಧುಮೇಹ ನಿಯಂತ್ರಣ’ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತವು ಮಧುಮೇಹದ ರಾಜಧಾನಿಯಾಗಿದೆ. ಉತ್ತಮ ಜೀವನ ಶೈಲಿಯಿಂದ ಮಾತ್ರ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು ಎಂದರು.
ಯೋಗ ಕೇಂದ್ರದ ನಿರ್ದೇಶಕ ಡಾ.ವಿ.ನಾಗೇಶ್ ಬೆಟ್ಟಕೋಟೆ, ‘ಮಧುಮೇಹ ನಿಯಂತ್ರಿಸಲು ಯೋಗವು ಸಹಕಾರಿ. ವ್ಯಾಯಾಮ, ಯೋಗ ಮತ್ತು ನಿಯಮಿತ ಆಹಾರ ಸೇವನೆಯಿಂದ ಮನುಷ್ಯ ರೋಗಮುಕ್ತನಾಗುತ್ತಾನೆ’ ಎಂದು ಹೇಳಿದರು.
ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಅರವಿಂದ ಮಧುಮೇಹ ಕೇಂದ್ರದ ಮುಖ್ಯಸ್ಥ ಡಾ.ಅರವಿಂದ ಜಗದೀಶ್ ಮಾಹಿತಿ ನೀಡಿದರು.