ಆಳಂದ: ಸಮಾಜ, ಸರ್ಕಾರ ಇಲ್ಲವೇ ಯಾವುದೇ ವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ, ಲೂಟಿ ಹಾಗೂ ತಾರತಮ್ಯವನ್ನು ಪ್ರತಿಭಟಿಸುವ ಧ್ವನಿ ಸಾಹಿತ್ಯದಲ್ಲಿರಬೇಕು. ಪರಿವರ್ತನಾ ಮನೋಧರ್ಮದಿಂದ ಸಾಹಿತಿಯು ಸದಾ ವಿರೋಧಪಕ್ಷದ ಸ್ಥಾನದಲ್ಲಿದಲ್ಲಿರಬೇಕು ಎಂದು ಬಂಡಾಯ ಸಾಹಿತಿ ಡಾ.ಪ್ರಭು ಖಾನಾಪುರೆ ನುಡಿದರು.
ಪಟ್ಟಣದ ಗುರುಭವನನದ ಎ.ವಿ.ಪಾಟೀಲ ವೇದಿಕೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಾವು ನಮ್ಮವರು ಅಲ್ಲ ಮತ್ತು ನಾನು ದೇಶಪ್ರೇಮಿ ಅಲ್ಲ ’ಎಂಬ ಕವನ ವಾಚನವು ಕವಿಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿತ್ತು. ರಾಷ್ಟ್ರಭಕ್ತಿ ಎನ್ನುವದು ಚರ್ಚೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯತೆ ಪ್ರದರ್ಶನದ ಮೇಲಾಟಗಳಿಗೆ ಉತ್ತರ ನೀಡಿ ಸಂಜೆ ಸಮಯದಲ್ಲಿ ಕುಳಿತಿದ್ದ ಸಾಹಿತಾಸಕ್ತರ ಚಪ್ಪಾಳೆಗಿಟ್ಟಿಸಿದರು.
ಕವಿಗೋಷ್ಟಿಯಲ್ಲಿ ಕವಿಗಳಾದ ಸುಭಾಷ ಮೋಘಾ, ಪ್ರಕಾಶ ಕೋಟ್ರೆ, ಶಶಿಕಾಂತ ಪಡಸಾವಳಿ, ನಾಗಪ್ಪ ಬೆಳಮಗಿ, ಎಸ್.ಕೆ.ಕಲ್ಯಾಣರಾವ, ರವಿ ಹೂಗಾರ, ಅಂಬರಾಯ ಕಾಂಬಳೆ, ಹಣಮಂತರಾವ ಮಂಗಾಣೆ, ರಮೇಶ ವಿಶ್ವಕರ್ಮ, ಮರೆಪ್ಪ ಸಿಂಧೆ, ಬಾಬುರಾವ ಸುಳ್ಳದ, ಮಂಗಳಾ ಕಪರೆ, ಕಾಂಚನಾ, ರಾಜೇಂದ್ರ, ರವೀಂದ್ರ ರುದ್ರವಾಡಿ, ಶ್ರೀಶೈಲ ಮಾಡ್ಯಾಳೆ, ರಾಘವೇಂದ್ರ ಹೊನ್ನಾವರ, ಸತೀಶ ಸನ್ಮುಖ, ಶ್ರೀಮಂತ, ಮಲ್ಲಿನಾಥ ತಮ್ಮ ಕವನಗಳವಾಚನದಿಂದ ಗಮನ ಸೆಳೆದರು. ಡಾ.ಸೂರ್ಯಕಾಂತ ಪಾಟೀಲ, ಸಮ್ಮೇಳನಾಧ್ಯಕ್ಷ ಎಸ್.ಪಿ.ಸುಳ್ಳದ ವಿಶ್ವನಾಥ ಭಕರೆ ಇದ್ದರು.
ನಂತರ ತಾಲ್ಲೂಕಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀರೇಶ ಶರಣರು, ಡಾ.ಎನ್.ಎಚ್.ಪಾಟೀಲ, ಶಂಕರ ಸೂರೆ, ನಿಂಗಣ್ಣ ಮುಂಗೋಡೆ ಇಸ್ಮಾಯಿಲ್ ನದಾಫ್ ಅವರನ್ನು ಸನ್ಮಾನಿಸಲಾಯಿತು. ನಂತರ ಸಮ್ಮೇಳನದ ಸಮಾರೋಪ ಭಾಷಣವನ್ನು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಾಡಿದರು. ಶಿವಶಾಂತರೆಡ್ಡಿ, ಸುನೀಲ ಹಿರೋಳಿಕರ, ಶ್ರೀಮಂತ ಜಿಡ್ಡೆ ಇದ್ದರು. ರಮೇಶ ಮಾಡಿಯಾಳಕರ ಸಮ್ಮೇಳನದ 5 ನಿರ್ಣಯಗಳು ಮಂಡಿಸಿದರು. ಸಮ್ಮೇಳನಾಧ್ಯಕ್ಷ ಸುಳ್ಳದ ಹಾಗೂ ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ ಇದೇ ಸಂದರ್ಭದಲ್ಲಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಹಲವರನ್ನು ಸನ್ಮಾನಿಸಿದರು.
ನಿರ್ಣಯಗಳು: ಕನ್ನಡ ಶಾಲೆಗಳನ್ನು ಉಳಿಸಲು ವಿಧಾನ ಪರಿಷತ್ನಲ್ಲಿ ರಘು ಆಚಾರ್ ಅವರು ಮಂಡಿಸಿದ ವಿಧೇಯಕ ಬೆಂಬಲಿಸಿ ಅದು ಜಾರಿಯಾಗಬೇಕು. ಅತ್ಯಾಚಾರ ತಡೆಗೆ ಕಠಿಣ ಕಾನೂನು ಜಾರಿ, ಆಳಂದ ತಾಲ್ಲೂಕಿನ ಅಮರ್ಜಾ ನದಿಗೆ ಭೀಮಾ ನದಿಯಿಂದ ನೀರು ಭರ್ತಿ ಮಾಡುವ ಕಾಮಗಾರಿ ತತ್ವರಿಗೊಳಿಸಬೇಕು. ತಾಲ್ಲೂಕಿನ ಶರಣರಾದ ಏಕಾಂತರಾಮಯ್ಯ, ಗಜೇಶ ಮಸಣಯ್ಯನ ಧಾರ್ಮಿಕ ಸ್ಥಳಗಳ ಅಭಿವೃದ್ಧಿ. ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣ, ಕಡಗಂಚಿಯ ಕೇಂದ್ರಿಯ ವಿವಿಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ನಾಮಕರಣ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.