ಮುಂಬೈ: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬ್ರಿಜ್ಗೋಪಾಲ್ ಹರ್ಕಿಶನ್ ಲೋಯ (ಬಿ.ಎಚ್. ಲೋಯ) ಅವರ ಸಾವಿನ ತನಿಖೆ ಆಗಲೇಬೇಕು ಎಂದು ಅವರ ಚಿಕ್ಕಪ್ಪ ಶ್ರೀನಿವಾಸ್ ಲೋಯ ಒತ್ತಾಯಿಸಿದ್ದಾರೆ.
‘ತಂದೆಯ ಸಾವಿನ ಬಗ್ಗೆ ಅನುಮಾನಗಳಿಲ್ಲ. ಈವರೆಗಿನ ಘಟನಾವಳಿಗಳಿಂದ ನಾವು ನೊಂದಿದ್ದೇವೆ. ನಮಗೆ ಕಿರುಕುಳ ನೀಡಬೇಡಿ’ ಎಂದು ಬಿ.ಎಚ್. ಲೋಯ ಅವರ ಮಗ ಅನುಜ್ ಲೋಯಾ, ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸ್ ಲೋಯ, ಸಾವಿನ ಬಗ್ಗೆ ತನಿಖೆ ನಡೆಸಲೇಬೇಕು ಎಂದು ಹೇಳಿದ್ದಾರೆ.
‘ಅನುಜ್ ಲೋಯ ಇನ್ನೂ ಚಿಕ್ಕವನು. ಆತ ಯಾವುದೋ ಒತ್ತಡಕ್ಕೆ ಮಣಿದು ಮಾಧ್ಯಮಗೋಷ್ಟಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ತಮಗೆ ಕಿರುಕುಳ ನೀಡಬಾರದು ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಲೋಯ ಅವರ ಸಾವಿನ ಬಗ್ಗೆ ತನಿಖೆ ನಡೆಯುವುದು ಒಳ್ಳೆಯದು’ ಎಂದು ಶ್ರೀನಿವಾಸ್ ಲೋಯ ಹೇಳಿದ್ದಾರೆ.
‘ಈ ಬಗ್ಗೆ ನಾನು ಈಗ ಏನು ಮಾತಾಡಲಿ? ಅನುಜ್ ಪ್ರೌಢಿಮೆ ಉಳ್ಳವನೇ? ಅವನಿಗೆ ಕೇವಲ 18 ವರ್ಷ. ಆತ ಯಾವುದೋ ಒತ್ತಡಕ್ಕೆ ಸಿಲುಕಿ ಮಾತನಾಡಿದ್ದಾನೆ’ ಎಂದು ಲೋಯ ಅವರ ಚಿಕ್ಕಪ್ಪ ಶ್ರೀನಿವಾಸ್ ಲೋಯ ಹೇಳಿದ್ದನ್ನು ಕರವಾನ್ ನಿಯತಕಾಲಿಕೆ ವರದಿ ಮಾಡಿದೆ.
’ಲೋಯ ಅವರ ಸಾವಿನ ಬಗ್ಗೆ ಸಂಬಂಧಿಕರನ್ನು ವಿಚಾರಿಸಬೇಡಿ. ನಾಗರಿಕರ ಬಗ್ಗೆ ಕೇಳಿ. ಸುಪ್ರೀಂ ಕೋರ್ಟ್ ನಾಗರಿಕರ ದೃಷ್ಟಿಕೋನದಲ್ಲಿ ತನಿಖೆ ನಡೆಸಬೇಕು. ಇದು ನನ್ನ ವೈಯಕ್ತಿಕ ನಿಲುವು’ ಎಂದು ಅವರು ಹೇಳಿದ್ದಾರೆ.
ಕುಟುಂಬದವರ ಮೇಲೆ ಯಾರು ಒತ್ತಡ ಹೇರಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್, ‘ಅನುಜ್ ಅಜ್ಜನಿಗೆ 85 ವರ್ಷವಾಗಿದೆ. ಅಜ್ಜಿಯೂ ಜತೆಯಲ್ಲಿಯೇ ಇದ್ದಾರೆ. ಲೋಯ ಅವರ ಮಗಳು ಕೂಡ ಮದುವೆಯಾದ ಬಳಿಕ ಇಲ್ಲಿಯೇ ಇದ್ದಾರೆ. ಇವೆಲ್ಲವೂ ಒತ್ತಡಕ್ಕೆ ಕಾರಣ ಇರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿ.ಎಚ್. ಲೋಯ 2014ರ ಡಿಸೆಂಬರ್ನಲ್ಲಿ ಮೃತಪಟ್ಟಿದ್ದರು.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಆರೋಪಿಯಾಗಿರುವ, ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವನ್ನು ಲೋಯ ವಿಚಾರಣೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಈಗ ಅಮಿತ್ ಷಾ ಖುಲಾಸೆಯಾಗಿದ್ದಾರೆ.