ಮಡಿಕೇರಿ: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಮಕರ ಸಂಕ್ರಾಂತಿ ಉತ್ಸವ ಭಾನುವಾರ ನಡೆಯಿತು.
ಬೆಳಿಗ್ಗೆ ಗಣಹೋಮ, ಕ್ಷೀರಾಭಿಷೇಕ, ಅಲಂಕಾರ ಪೂಜೆ, ನಂತರ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ- ಉತ್ಸವ ಬಲಿ, ಮಹಾಮಂಗಳಾರತಿ ಮುಂತಾದ ಪೂಜೆಗಳು ಜರುಗಿದವು.
ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸಂಜೆ ಭಜನಾ ಕಾರ್ಯಕ್ರಮ, ಪಡಿಪೂಜೆ ನಂತರ ಪ್ರಸಾದ ವಿನಿಯೋಗ ಭಕ್ತಾಧಿಗಳಿಗೆ ನೀಡಲಾಯಿತು.
ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಇನ್ನು ನಗರದ ಓಂಕಾರೇಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಪೊಂಗಲ್ ಸಂಭ್ರಮದಲ್ಲಿ ಸುಂಟಿಕೊಪ್ಪ: ಇಲ್ಲಿನ ಪೊಂಗಲ್ ಸಮಿತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೊಂಗಲ್ (ಸಂಕ್ರಾಂತಿ) ಹಬ್ಬವನ್ನು ಭಾನುವಾರ ಶ್ರದ್ಧಾ ಭಕ್ತಿಯಿಂದ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಭಾನುವಾರ ಆಚರಿಸಿತು.
ಇಲ್ಲಿನ ಮಧುರಮ್ಮ ಬಡಾವಣೆಯಲ್ಲಿರುವ ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಹಿಳೆಯರು ನೆರವೇರಿಸಿದರು.
ಹಾಲಿನಿಂದ ತುಂಬಿದ ಪೂರ್ಣ ಕುಂಭ ಕಳಶವನ್ನು ಹೊತ್ತು ನಾದಸ್ವರದೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾಮ ಮಂದಿರ, ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಅಲ್ಲಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳಸಗಳಿಗೆ ಪೂಜೆ ನಡೆಸಿದರು.
ಮನೆಗಳ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಿ, ಹೊಸ ಬಟ್ಟೆಗಳನ್ನು ಧರಿಸಿ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು ಕಂಡುಬಂದಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.