ಬೆಂಗಳೂರು: ಭೂಮಿ ಇರುವವರೆಗೂ ರಂಗಭೂಮಿ ಜೀವಂತವಾಗಿರುತ್ತದೆ ಎಂದು ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು.
ಪ್ರಯೋಗ ರಂಗ ತಂಡದ ವತಿಯಿಂದ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ನಾಟಕ ಅಕಾಡೆಮಿ ಪುರಸ್ಕೃತರಿಗೆ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ದೇಶದಲ್ಲಿ ವಿವಿಧ ಭಾಷೆಗಳ ರಂಗಭೂಮಿ ಅಸ್ತಿತ್ವದಲ್ಲಿದೆ. ಇವುಗಳ ಪೈಕಿ ಕನ್ನಡ ರಂಗಭೂಮಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತದೆ. ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿದೆ ಎಂದರು.
ರಂಗಕರ್ಮಿ ಕೆ.ರೇವಣ್ಣ, ‘ರಂಗಭೂಮಿಯು ಸಮಾನತೆ ಹಾಗೂ ಭ್ರಾತೃತ್ವವನ್ನು ಸಾರುತ್ತದೆ. ಇಲ್ಲಿ ಕೌಟುಂಬಿಕ ವಾತಾವರಣ ಇಂದಿಗೂ ಉಳಿದಿದೆ’ ಎಂದರು.
ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರ ಗಾಯನ ಹಾಗೂ ‘ಬ್ಲಡ್ ವೆಡ್ಡಿಂಗ್’ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು