ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿ ನಿಮಿತ್ತ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಕಣ್ಮನ ಸೆಳೆಯಿತು.
ಗೋಧೂಳಿ ಲಗ್ನದಲ್ಲಿ ಸಂಜೆ 6.30ಕ್ಕೆ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಮುಂದಿನ ರಸ್ತೆಯಲ್ಲಿ, ಮಿನಿ ವಿಧಾನಸೌಧ ವೃತ್ತವರೆಗೆ 250 ಮೀಟರ್ ಉದ್ದಕ್ಕೆ ದೀಪಗಳನ್ನು ಜೋಡಿಸಲಾಗಿತ್ತು.
ನೆಲದ ಮೇಲೆ ಅಡಿಕೆ ದಬ್ಬೆಯ 8 ಸಾಲುಗಳು ಹಾಗೂ ರಸ್ತೆಯಲ್ಲಿ 10 ಸಾಲುಗಳಲ್ಲಿ ದೀಪ ಜೋಡಿಸಲಾಗಿತ್ತು. ಶ್ರೀರಂಗನಾಥಸ್ವಾಮಿ ದೇವಾಲಯ ಆವರಣ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಪೇಟೆ ನಾರಾಯಣಸ್ವಾಮಿ ದೇಗುಲ, ಗಂಗಾಧರೇಶ್ವರ ದೇವಾಲಯ ಸೇರಿ 80 ಸಾವಿರಕ್ಕೂ ಹೆಚ್ಚು ದೀಪಗಳನ್ನು ಇಟ್ಟು ಬೆಳಗಿಸಲಾಯಿತು.
ಲಕ್ಷ ದೀಪೋತ್ಸವ ಆಚರಣಾ ಸಮಿತಿ ಇದಕ್ಕಾಗಿ ಒಂದು ಸಾವಿರ ಲೀಟರ್ ಎಣ್ಣೆ ತರಿಸಿತ್ತು. ದೀಪೋತ್ಸವ ಆರಂಭವಾದ ಸಮಯಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವರ್ಗದ ಬಾಗಿಲು ತೆರೆಯಲಾಯಿತು. ಆದಿರಂಗನ ಬೆಣ್ಣೆಯಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಮಂಡ್ಯ, ಮೈಸೂರು, ಬೆಂಗಳೂರು ಇತರ ಕಡೆಗಳಿಂದಲೂ ಆಗಮಿಸಿದ್ದ ಭಕ್ತರು ಶ್ರೀರಂಗನಾಥ ದರ್ಶನ ಪಡೆದು ಪುನೀತರಾದರು. ದೇವಾಲಯದ ಆವರಣದಲ್ಲಿ ಬಣ್ಣ ಬಣ್ಣದ ರಂಗವಲ್ಲಿಗಳು ಗಮನ ಸೆಳೆದವು.