ನವದೆಹಲಿ: ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರು ಮಂಗಳವಾರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಹಿರಿಯ ನ್ಯಾಯಮೂರ್ತಿಗಳು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ವಿರುದ್ಧ ಅಸಮಾಧಾನ ಹೊರಹಾಕಿದ್ದರ ನಂತರದ ಬಿಕ್ಕಟ್ಟುಗಳ ಶಮನಕ್ಕೆ ಮಾತುಕತೆ ವೇಳೆ ಪ್ರಯತ್ನ ನಡೆಸಲಾಯಿತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಚೇಂಬರ್ನಲ್ಲಿ ಸುಮಾರು 15 ನಿಮಿಷ ನಡೆದ ಮಾತುಕತೆಯಲ್ಲಿ ನ್ಯಾಯಾಂಗ ಸಂಬಂಧಿತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಆದಾಗ್ಯೂ, ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ನಾಳೆ (ಬುಧವಾರ) ಮತ್ತೆ ಸಭೆ ನಡೆಯಲಿದೆ.
ಸ್ನೇಹಪರ ಮಾತುಕತೆ ನಡೆದಿದ್ದು, ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಾಮರ್ಥ್ಯ ಸಂಸ್ಥೆಗಿದೆ ಎಂಬ ಬಗ್ಗೆ ಐವರು ನ್ಯಾಯಮೂರ್ತಿಗಳೂ ಒಮ್ಮತಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.