ನವದೆಹಲಿ: ವಯಸ್ಸಿಗೆ ಬಂದ ಹುಡುಗ ಮತ್ತು ಹುಡುಗಿ ಪರಸ್ಪರ ಒಪ್ಪಿ ಮದುವೆಯಾಗುವುದಾದರೆ ಅದನ್ನು ತಡೆಯುವುದು ಯಾರಿಂದಲೂ ಸಾಧ್ಯ
ವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಗ್ರಾಮದ ಮುಖಂಡರನ್ನು ಒಳಗೊಂಡ ‘ಖಾಪ್ ಪಂಚಾಯತ್’ ಸೇರಿದಂತೆ ಬೇರೆ ಯಾವುದೇ ಸಂಘಟನೆ ಇಲ್ಲವೇ ವ್ಯಕ್ತಿಗಳಾಗಲಿ ಇಂತಹ ಮದುವೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿಯ ಖಾಪ್ ಪಂಚಾಯತ್ಗಳು ಅಂತರ್ಜಾತಿ ಮದುವೆಗಳಿಗೆ ತಡೆಯೊಡ್ಡುತ್ತಿರುವುದು ಸಂಪೂರ್ಣ ಕಾನೂನುಬಾಹಿರ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ 3 ಸದಸ್ಯರ ನ್ಯಾಯಪೀಠ ಹೇಳಿದೆ.
2010ರಲ್ಲಿ ಶಕ್ತಿವಾಹಿನಿ ಎಂಬ ಸ್ವಯಂಸೇವಾ ಸಂಸ್ಥೆ ಮರ್ಯಾದೆಗೇಡು ಹತ್ಯೆ ತಡೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಸಂಬಂಧ ಕೆಲವು ನಿರ್ದೇಶನ ನೀಡಿದೆ.
ವಯಸ್ಕ ಹುಡುಗ– ಹುಡುಗಿಯರಿಗೆ ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕು ಇದೆ. ಅದನ್ನು ಕಸಿಯುವ ಅಧಿಕಾರ ಖಾಪ್ ಪಂಚಾಯತ್ ಸೇರಿದಂತೆ ಯಾರಿಗೂ ಇಲ್ಲ ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಇಂತಹ ಮದುವೆಗಳನ್ನು ತಡೆಯುವ ಶಕ್ತಿಗಳಿಗೆ ಕಡಿವಾಣ ಹಾಕುವ ಕಾನೂನು ರೂಪಿಸುವುದು ಸಾಧ್ಯವಿಲ್ಲ ಎಂದಾದರೆ, ನಾವೇ ಅಂತಹ ವಾತಾವರಣ ನಿರ್ಮಾಣ ಮಾಡೋಣ. ಸಂಪ್ರದಾಯವಾದಿ ಸಮಾಜದಿಂದ ಇಂತಹ ಬದಲಾವಣೆ ಅಪೇಕ್ಷೆ ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದಕ್ಕೆ ಉತ್ತರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ಮರ್ಯಾದೆಗೇಡು ಹತ್ಯೆ ತಡೆ ಕಾನೂನು ರೂಪಿಸುವ ಸಂಬಂಧ ಕೇಂದ್ರ ಸರ್ಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೇಳಿದೆ ಎಂದು ತಿಳಿಸಿದರು.