ಚಂಡಿಗಡ: ವಿರೋಧಕ್ಕೆ ಗುರಿಯಾದ, ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರವನ್ನು ಹರಿಯಾಣದಲ್ಲಿ ಪ್ರದರ್ಶಿಸುವುದಕ್ಕೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನೇತೃತ್ವದ ಸರ್ಕಾರ ತಡೆ ನೀಡಿದೆ.
‘ಪದ್ಮಾವತಿ/ ಪದ್ಮಾವತ್ ಚಿತ್ರವನ್ನು ಹರಿಯಾಣದಲ್ಲಿ ನಿಷೇಧಿಸಲಾಗಿದೆ’ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
‘ರಾಣಿ ಪದ್ಮಾವತಿ ಅವರ ವರ್ಚಸ್ಸು ಕೆಡುವಂತೆ ಬನ್ಸಾಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಲಕ್ಷಾಂತರ ಜನರ ಭಾವನೆಯನ್ನು ನೋಯಿಸಿದೆ. ಖಂಡಿತವಾಗಿಯೂ ರಾಜ್ಯದಲ್ಲಿ ಈ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ಅನಿಲ್ ಈ ಹಿಂದೆ ಹೇಳಿದ್ದರು.