ಬೆಂಗಳೂರು: ‘ನೀರು ಸಿಗದೆ ಪರಿತಪಿಸುತ್ತಿದ್ದೇವೆ. ನಮ್ಮೂರು ಬಿಟ್ಟು ಇಲ್ಲಿಗೆ ವಲಸೆ ಬಂದಿರುವ ನಮ್ಮನ್ನು ಕಡೆಗಣಿಸದೆ, ನೀರು ಒದಗಿಸಿ ಸ್ವಾಮಿ’ ಎಂದು ತೋಟಗೆರೆ ನಿವಾಸಿ ಸುಮಾ ಕೋರಿದರು.
ದಾಸನಪುರ ಹೋಬಳಿ ತೋಟಗೆರೆ ಗ್ರಾಮದಲ್ಲಿ 25 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟಿಸಲು ಬಂದಿದ್ದ ಶಾಸಕ ವಿಶ್ವನಾಥ್ ಅವರ ಬಳಿ ವಲಸಿಗರು ಅಳಲು ತೋಡಿಕೊಂಡರು.
‘ಶ್ರೀಕಂಠಪುರ ಗ್ರಾಮ ಪಂಚಾಯಿತಿಯ ಯಾವ ಸದಸ್ಯರಿಗೂ ನಮ್ಮ ಬವಣೆ ಕಾಣಿಸುತ್ತಿಲ್ಲ. ಎಷ್ಟು ಬಾರಿ ನೀರು ಕೊಡಿ ಎಂದು ಮನವಿ ಮಾಡಿದರೂ ಕಿವುಡರಂತೆ ವರ್ತಿಸುತ್ತಿದ್ದಾರೆ. ಅವರ ಮನೆಗಳ ಸುತ್ತಮುತ್ತಲ ಸಮಸ್ಯೆಗಳನ್ನು ಮಾತ್ರ ಪರಿಹರಿಸಿಕೊಂಡಿದ್ದಾರೆ’ ಎಂದು ದೂರಿದರು.
‘ನೀರು ಕೊಡಿ ಎಂದು ಪ್ರತಿಭಟಿಸಿದರೆ, ಚುನಾವಣೆ ಮುಗಿದ ಮೇಲೆ ನೋಡೊಣ ಎನ್ನುತ್ತಾರೆ. ಅಲ್ಲಿಯವರೆಗೆ ಬಾಯಾರಿಕೊಂಡು ಇರಲು ಆಗ್ತದಾ’ ಎಂದು ಸ್ಥಳೀಯ ನಿವಾಸಿ ಗಾಯತ್ರಿ ಪ್ರಶ್ನಿಸಿದರು.
ಶಾಸಕ ವಿಶ್ವನಾಥ್ , ‘ಇಲ್ಲಿ ನೀರಿನ ಸಮಸ್ಯೆ ಇದೆ ಎಂದು ನನ್ನ ಗಮನಕ್ಕೆ ಬಂದಿರಲಿಲ್ಲ. ವಾರದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇನೆ. ಅಗಬೇಕಿರುವ ಕೆಲಸ ಇನ್ನು ಬಾಕಿ ಇದೆ. ಅವುಗಳನ್ನು ಮಾಡುತ್ತೇನೆ’ ಎಂದು ಭರವಸೆ ನೀಡಿದರು.