ಬೆಂಗಳೂರು: ಬಿಬಿಎಂಪಿಯ ಅಧಿಕಾರಿಗಳು 2018–19ನೇ ಸಾಲಿನ ಬಜೆಟ್ ರೂಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಮೇಯರ್ ಆರ್.ಸಂಪತ್ ರಾಜ್, ಪಾಲಿಕೆಯ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹಾಗೂ ವಿಶೇಷ ಆಯುಕ್ತ ಆರ್.ಮನೋಜ್ ರಾಜನ್ ಅವರು ವಿವಿಧ ವಿಭಾಗಗಳ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ ಯಾವೆಲ್ಲ ಕಾಮಗಾರಿಗಳನ್ನು ಬಜೆಟ್ಗೆ ಸೇರಿಸಬಹುದು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ಬಜೆಟ್ ಕರಡು ಪ್ರತಿಯನ್ನು ಆಯುಕ್ತರು ಅಂತಿಮಗೊಳಿಸಲಿದ್ದು, ಅದನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಲಿದ್ದಾರೆ. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪರಿಶೀಲಿಸಿ ಅಂತಿಮ ರೂಪ ನೀಡಲಿದ್ದಾರೆ.
ಪಾಲಿಕೆ ಆರ್ಥಿಕ ಸ್ಥಿತಿ ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್ ರೂಪಿಸಲಾಗುತ್ತಿದೆ. ಇದು ಬಡವರು ಹಾಗೂ ಮಧ್ಯಮದವರ ಪರವಾಗಿದ್ದು, ಸರಳ
ವಾದ ಬಜೆಟ್ ಆಗಲಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಮಹಾದೇವ ತಿಳಿಸಿದರು.
ರಾಜ್ಯ ಸರ್ಕಾರದ ಬಜೆಟ್ ಫೆಬ್ರುವರಿಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಇದಾದ ಒಂದು ವಾರದ ಬಳಿಕ ಬಿಬಿಎಂಪಿ ಬಜೆಟ್ ಮಂಡಿಸಲಾಗುತ್ತದೆ ಎಂದರು.