ಯಾದಗಿರಿ: ‘ಜನರು ಜಾಗೃತರಾಗುವುದರಿಂದಲೂ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ.ಮುದ್ನಾಳ ಹೇಳಿದರು. ಕೊಂಕಲ್, ಮಲ್ಕಪ್ಪನಳ್ಳಿ, ಪಸಪುಲ್, ಗಣಪುರ, ಗುಂಜನೂರು, ದಂತಾಪುರ ಗ್ರಾಮಗಳಲ್ಲಿ ಮಂಗಳವಾರ ಕೋಲಿ ಸಮಾಜದ ಜನಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು.
‘ಶಿಕ್ಷಣದಿಂದ ದೂರ ಉಳಿದಿರುವುದರಿಂದ ಕಬ್ಬಲಿಗ ಸಮಾಜ ಶೈಕ್ಷಣಿಕ ಸದೃಢತೆಯ ಕೊರತೆ ಅನುಭವಿಸುತ್ತಿದೆ. ಇದರಿಂದ ಸಮಾಜದಲ್ಲೂ ಅಷ್ಟಾಗಿ ಜಾಗೃತಿ ಉಂಟಾಗುತ್ತಿಲ್ಲ. ಸಮಾಜದವರು ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.
‘ಜ.21ರಂದು ಸರ್ಕಾರದ ವತಿಯಿಂದ ಹಮ್ಮಿಕೊಳ್ಳುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಂಬಿಗರ ಚೌಡಯ್ಯನವರ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು. ಅಂದು ಅಂಬಿಗರ ಚೌಡಯ್ಯ ಹಾಗೂ ವಿಠಲ್ ಹೇರೂರು ಅವರ ಕಿರುಚಿತ್ರ ಸಿಡಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.
ಕೋಲಿ ಸಮಾಜ ಜನಜಾಗೃತಿ ಅಭಿಯಾನ ಹಾಗೂ ಚೌಡಯ್ಯನವರ ಮೂರ್ತಿಯನ್ನು ಬಾಜಾ ಭಜಂತ್ರಿಗಳೊಂದಿಗೆ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಯುವ ಮುಖಂಡ ದಿಲೀಪ್ಕುಮಾರ ಎನ್.ಮಳಬ ಮಾತನಾಡಿದರು.